ಬೆಂಗಳೂರು: ರಾಜ್ಯದಲ್ಲಿ ವಿಧಾನಪರಿಷತ್ನ 7 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಎಲ್ಲಾ ಪಕ್ಷಗಳ ಶಾಸಕರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಆದ್ರೆ ಕಾಂಗ್ರೆಸ್ ಐದನೇ ಅಭ್ಯರ್ಥಿಯ ಗೆಲುವಿನ ಲೆಕ್ಕಾಚಾರ ಜೋರಾಗಿರುವ ಹೊತ್ತಿನಲ್ಲೇ ಜೆಡಿಎಸ್ಗೆ ಅಡ್ಡಮತದಾನದ ಭೀತಿ ಎದುರಾಗಿದೆ. ಇಂದು ಪರಿಷತ್ ಚುನಾವಣೆಯಲ್ಲಿ (Legislative Council Election) ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ (GT Devegowda) ಅವರು ಅಡ್ಡ ಮತದಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಜಿ.ಟಿ ದೇವೇಗೌಡ ಅವರ ಪುತ್ರ ಜಿ.ಡಿ ಹರೀಶ್ ಗೌಡ (GD Harishgowda) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ನಮ್ಮ ಎಲ್ಲ 18 ಶಾಸಕರೂ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ನಮ್ಮ ತಂದೆಯವರ ಜೊತೆ ನಾನು ಮಾತಾಡಿಲ್ಲ. ಆದ್ರೆ ತಂದೆಯವರ ಮತದ ಬಗ್ಗೆ ಮಾಧ್ಯಮಗಳಲ್ಲಿ ಏನೇನೋ ಬರ್ತಿದೆ ಅಂತ ನಮ್ಮ ಕಾರ್ಯಕರ್ತರು ನನಗೆ ಕರೆ ಮಾಡಿ ಹೇಳಿದ್ರು. ಖಂಡಿತಾ ಅವರು ಜೆಡಿಎಸ್ಗೇ ಮತ ಹಾಕಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮ 18 ಶಾಸಕರ ಮತ ನಮ್ಮ ಅಭ್ಯರ್ಥಿಗೇ ಹೋಗಿದೆ, ನಮ್ಮಪ್ಪನ ಬಗ್ಗೆ ಅನುಮಾನ ವ್ಯಕ್ತಪಡಿಸೋದು ಏನಿಲ್ಲ ಎಂಬುದು ನನ್ನ ಭಾವನೆ. ಜಿಟಿ ದೇವೇಗೌಡರ ಜೊತೆ ನಮ್ಮೆಲ್ಲ ವರಿಷ್ಠರು ಚರ್ಚೆ ಮಾಡಿದ್ದಾರೆ. ಅವರೇ ಹೇಳಿಕೆ ಕೊಟ್ಟ ಮೇಲೆ ಈ ಪ್ರಶ್ನೆ ಉದ್ಬವವಾಗೋದಿಲ್ಲ. ನಾವೆಲ್ಲ 18 ಶಾಸಕರು ನಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ದೇವೆ ಎಂದು ನುಡಿದರು.

ಎಸ್.ಟಿ.ಸೋಮಶೇಖರ್, ಹೆಬ್ಬಾರ್ ಬಿಜೆಪಿಗೆ ಟಾಂಗ್
ಇನ್ನೂ ಅಡ್ಡ ಮತದಾನ ಮಾಡಿ ಜೆಡಿಎಸ್ಗೆ ಶಾಕ್ ಕೊಟ್ಟ ಬೆನ್ನಲ್ಲೇ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ. ಮತದಾನ ಬಳಿಕ ಮಾತನಾಡಿದ ಎಸ್.ಟಿ.ಸೋಮಶೇಖರ್ ಬಿಜೆಪಿಯಾಗಲಿ ಜೆಡಿಎಸ್ ಆಗಲಿ ನನಗೆ ಅಪ್ರೋಚ್ ಮಾಡಿರಲಿಲ್ಲ. ಸಿಎಂ ಕರೆ ಮಾಡಿ ಮತ ಹಾಕೋಕೆ ಮನವಿ ಮಾಡಿಕೊಂಡ್ರು. ನಮ್ಮ ಏರಿಯಾದ ಸಮಸ್ಯೆ ಬಗೆಹರಿಸಿದ್ರೇ ಮತ ಹಾಕೋದಾಗಿ ಹೇಳಿದ್ದೆ. ಹಂತ ಹಂತವಾಗಿ ಕ್ಷೇತ್ರದ ಅಭಿವೃದ್ಧಿ ಮಾಡ್ತೇವೆ ಅಂತಾ ಹೇಳಿದ್ದಾರೆ. ಈಗ ಎಲ್ಲವೂ ಮುಗಿಯಿತು ನಾನು ಕಾಂಗ್ರೆಸ್ ಅಭ್ಯರ್ಥಿ ಪರ ಮತ ಹಾಕಿ ಆಯ್ತು ಎಂದಿದ್ದಾರೆ.
ಇದೇ ವೇಳೆ ʻಪಬ್ಲಿಕ್ ಟಿವಿʼ ಜೊತೆ ಮಾತನಾಡಿ ಶಿವರಾಮ್ ಹೆಬ್ಬಾರ್ ಜೆಡಿಎಸ್ ಬಿಜೆಪಿಯವರು ಯಾರು ನನ್ನ ಹತ್ತಿರ ಮತ ಕೇಳಿಲ್ಲ ಕಾಂಗ್ರೆಸ್ನವರು ಮತ ಕೇಳಿದ್ದು, ಆತ್ಮ ಸಾಕ್ಷಿಗೆ ಮತ ಹಾಕಿದ್ದೇನೆ ಎಂದ್ರು.
