ಚಾಮರಾಜನಗರ: ಶಾಸ್ತ್ರಿಗಳು ಮುಂದಿನ ಮುಖ್ಯಮಂತ್ರಿ ನಾನೇ ಎಂದು ಭವಿಷ್ಯ ನುಡಿದಿದ್ದಾರೆ. ಹೀಗಾಗಿ ನನಗೆ ಮತ ಹಾಕಿ ಎಂಬುದಾಗಿ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಭ್ಯರ್ಥಿ ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ.
ಶಾಸ್ತ್ರಿಗಳು ಹೇಳೋ ಪ್ರಕಾರ ನಾನು ಸಿಎಂ ಆಗೋದು ಖಚಿತ. ನಾನು ಸಿಎಂ ಆದರೆ ಚಾಮರಾಜನಗರಕ್ಕೆ ಕೀರ್ತಿ ಎಂದು ತಿಳಿಸಿದರು.
ಮತಕ್ಕಾಗಿ ಯಾರೇ ಹಣ ನೀಡಿದರೂ ಬೇಡಾ ಎನ್ನಬೇಡಿ. ಹಣ ಕೊಡುವವರಿಂದ ಹಣ ಪಡೆಯಿರಿ. ಹಣ ಪಡೆದು ಓಟು ನಿಮಗೆ ಸ್ವಾಮಿ ಅನ್ನಿ. ಆದರೆ ಮತ ಮಾತ್ರ ನನಗೆ ಹಾಕಿ ಎಂದಿದ್ದಾರೆ.
ನನಗೆ ನೀವು ಓಟ್ ಹಾಕಿದರೆ ಬೆಂಗಳೂರಿಗೆ ಹೋಗಲು 200 ಬಸ್ ಮಾಡುತ್ತೇನೆ. ಬೆಂಗಳೂರಿಗೆ ಬಂದು ಮಜಾ ಮಾಡಿ. ನಾನೇ ಊಟೋಪಚಾರ ಮಾಡಿಸುತ್ತೇನೆ ಎಂದು ಮತದಾರರಿಗೆ ವಿಭಿನ್ನ ರೀತಿಯಲ್ಲಿ ಆಮಿಷ ಒಡ್ಡಿ ಪ್ರಚಾರ ಮಾಡಿದರು.
ಪ್ರತಿಭಟನೆ ಹೋರಾಟದ ಮೂಲಕ ರಾಜ್ಯದ ಮನೆ ಮಾತಾಗಿರುವ ಹಾಗೂ ಕನ್ನಡ ಚಳುವಳಿ ವಾಟಾಳ್ ಪಕ್ಷದ ಸ್ಥಾಪಕರಾದ ವಾಟಾಳ್ ನಾಗರಾಜ್ 1989, 1994, 2004 ರಲ್ಲಿ ಚಾಮರಾಜನಗರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಕಳೆದ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಪುಟ್ಟರಂಗ ಶೆಟ್ಟಿಯವರು 1,1196 ಮತಗಳ ಅಂತರದಿಂದ ಕೆಜೆಪಿಯ ಕೆ ಆರ್ ಮಲ್ಲಿಕಾರ್ಜುನಪ್ಪ ಅವರ ವಿರುದ್ಧ ಜಯಗಳಿಸಿದ್ದರು. ಈ ಬಾರಿ ಕೆ ಆರ್ ಮಲ್ಲಿಕಾರ್ಜುನಪ್ಪ ಬಿಜೆಪಿಯಿಂದ ಸ್ಪರ್ಧಿಸಿದ್ದು ಒಟ್ಟು 14 ಅಭ್ಯಥಿಗಳು ಕಣದಲ್ಲಿದ್ದಾರೆ.