ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಯುವಮುಖಂಡ ಪ್ರವೀಣ್ ಕುಮಾರ್ ನೆಟ್ಟಾರ್ ಹತ್ಯೆ ಬಳಿಕ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಯಿಂದ ನಮ್ಮ ನಾಯಕರು ತಲೆ ಎತ್ತಿಕೊಂಡು ಓಡಾಡೋಕೆ ಆಗ್ತಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಹತ್ಯೆಗೊಳಗಾದ ಬಿಜೆಪಿ ಯುವ ಮುಖಂಡ ಪ್ರವೀಣ್ ಕುಮಾರ್ ನೆಟ್ಟಾರ್ ಮನೆಗೆ ವಿಜಯೇಂದ್ರ ಭೇಟಿ ನೀಡಿ, ಕುಟುಂಬಸ್ಥರ ನೋವನ್ನು ಆಲಿಸಿದರು. ಈ ವೇಳೆ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು, ಅವರಿಗೆ ಜಾಮೀನು ಸಿಗಬಾರದು ಎಂದು ಪ್ರವೀಣ್ ಪತ್ನಿ ನೂತನಾ ಒತ್ತಾಯಿಸಿದರು. ಇದನ್ನೂ ಓದಿ: ಪ್ರವೀಣ್ ಪತ್ನಿಗೆ ಟಿಕೆಟ್ ಕೊಡಿ – ಬಿಜೆಪಿ ಕಾರ್ಯಕರ್ತರ ಹೊಸ ಬೇಡಿಕೆ
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ, ಪ್ರವೀಣ್ ಹತ್ಯೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಇದು ರಾಜಾಸ್ಥಾನದಲ್ಲಿ ನಡೆದ ಟೈಲರ್ ಹತ್ಯೆಯ ಚೈನ್ಲಿಂಕ್ ರೀತಿ ಕಾಣುತ್ತದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪ್ರವೀಣ್ ಹತ್ಯೆ ಖಂಡಿಸಿ 19 ಮಂದಿ ಬಿಜೆಪಿ ಕಾರ್ಯಕರ್ತರು ರಾಜೀನಾಮೆ
ಸದ್ಯ ರಾಜ್ಯಾದ್ಯಂತ ಕಾರ್ಯಕರ್ತರ ಆಕ್ರೋಶದ ಬಗ್ಗೆ ಅರ್ಥ ಆಗಿದೆ. ಗೃಹಸಚಿವರೂ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಇದರಿಂದ ನಾಯಕರು ತಲೆ ಎತ್ತಿ ಓಡಾಡಲು ಸಾಧ್ಯ ಆಗ್ತಿಲ್ಲ. ಇಂತಹ ಘಟನೆ ಪುನರಾವರ್ತನೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರವೀಣ್ ಪತ್ನಿ ನೂತನಾ ಅವರಿಗೆ ಸರ್ಕಾರಿ ಉದ್ಯೋಗ ಕೊಡಲೇಬೇಕು. ಆಕೆ ಇನ್ನೂ ನಿಗದಿತ ವಯೋಮಿತಿಯ ಒಳಗಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳ ಮನವೊಲಿಸುತ್ತೇವೆ. ಇವರದ್ದು ಬಡ ಕುಟುಂಬವಾದ್ದರಿಂದ ಮನೆಯ ಆರ್ಥಿಕ ಸ್ಥಿತಿಯೂ ಉತ್ತಮವಾಗಿಲ್ಲ. ನಾವೆಲ್ಲರೂ ಕುಟುಂಬದ ಜವಾಬ್ದಾರಿ ಹೊರುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಪ್ರವೀಣ್ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಬೊಮ್ಮಾಯಿ
ಪ್ರವೀಣ್ ಹತ್ಯೆ ಹಿನ್ನೆಲೆಯಲ್ಲಿ ಬಂಧಿಸಲಾದ ವ್ಯಕ್ತಿಗಳಿಗೆ ಜಾಮೀನು ನೀಡಬಾರದು ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ. ಇಂತಹ ಘಟನೆ ಪುನರಾವರ್ತನೆ ಆಗದಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ. ಸಚಿವ ಅಂಗಾರ ಅವರು, ಸಿಎಂ ಜೊತೆ ಚರ್ಚಿಸಿ ಪರಿಹಾರ ಘೋಷಿಸುತ್ತಾರೆ. ಅಲ್ಲದೇ ಎಸ್ಡಿಪಿಐ, ಪಿಎಫ್ಐ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳಲು ಇದು ರೈಟ್ ಟೈಂ, ಅಲ್ಲಿವರೆಗೂ ಕಾರ್ಯಕರ್ತರು ಸಂಯಮದಿಂದಿರಬೇಕು ಎಂದು ಮನವಿ ಮಾಡಿದ್ದಾರೆ.
ಬಿಜೆಪಿ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ನಡೆಸಿರುವ ಕ್ರಮ ಸರಿಯಲ್ಲ ಎಂದೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ.