ಮಂಗಳೂರು: ಬೆಳ್ಳಾರೆಯ ಮೃತ ಪ್ರವೀಣ್ ಮನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದು, ಪ್ರವೀಣ್ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಮಂಗಳೂರು ಪ್ರವೀಣ್ ಹತ್ಯೆ ವಿಚಾರವಾಗಿ ಬೆಳ್ಳಾರೆಯ ನೆಟ್ಟೂರಿಗೆ ಸಿಎಂ ಆಗಮಿಸಿದ್ದಾರೆ. ಈ ವೇಳೆ ಪ್ರವೀಣ್ ಪತ್ನಿ ನೂತನಾ ಮಾತನಾಡಿ, ಇನ್ನು ಮುಂದೆ ಕಾರ್ಯಕರ್ತರ ಕೊಲೆ ಆಗಬಾರದು. ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕು. ಪಕ್ಷಕ್ಕಾಗಿ ನನ್ನ ಪತಿ ಹಗಲು-ರಾತ್ರಿ ದುಡಿದಿದ್ದಾರೆ. ನನ್ನ ಪತಿಗೆ ಆದ ಸ್ಥಿತಿ ಬೇರೆ ಕಾರ್ಯಕರ್ತರಿಗೆ ಬರಬಾರದು ಎಂದು ಸಿಎಂ ಬಳಿ ಮನವಿ ಮಾಡಿದರು.
ಇದೇ ರೀತಿ ಮುಂದುವರಿದರೆ ಪಕ್ಷ ಸಂಘಟನೆಗೆ ಯಾವ ಯುವಕರು ಮುಂದೆ ಬರುವುದಿಲ್ಲ. ಆರೋಪಿಗಳಿಗೆ ಶಿಕ್ಷೆ ನೀಡಿ ನಮಗೆ ನ್ಯಾಯ ಒದಗಿಸಬೇಕು. ನಾನು ದಿನಾಲು ಗಂಡನ ಜೊತೆ ಅಂಗಡಿಗೆ ಹೋಗುತ್ತಿದ್ದೆ. ಆದರೆ, ಕೊಲೆಯಾದ ದಿನ ಮಾತ್ರ ತಾಯಿ ಮನೆಗೆ ಹೋಗಿದ್ದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಪ್ರವೀಣ್ ಪತ್ನಿಗೆ ಟಿಕೆಟ್ ಕೊಡಿ – ಬಿಜೆಪಿ ಕಾರ್ಯಕರ್ತರ ಹೊಸ ಬೇಡಿಕೆ
ಇದಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಕಳೆದ ಎಲ್ಲಾ ಪ್ರಕರಣಗಳನ್ನು ಇಟ್ಟುಕೊಂಡು ಎಲ್ಲಾ ಆಯಾಮಗಳಲ್ಲೂ ತನಿಖೆಗೆ ಸೂಚನೆ ನೀಡಿದ್ದೇನೆ. ಈ ಪ್ರಕರಣದ ವರದಿ ಆಧಾರದ ಮೇಲೆ ಇನ್ನಷ್ಟು ತನಿಖೆಗೆ ಸೂಚಿಸಲಾಗಿದೆ. ಈ ಪ್ರಕರಣದ ಹಿಂದೆ ಇರುವ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುತ್ತೇವೆ. ಪಕ್ಷದಿಂದ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದೇವೆ. ಕುಟುಂಬ ನಿರ್ವಹಣೆಗೆ ಯಾವುದೇ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗುವುದು. ಕುಟುಂಬಕ್ಕೆ ಎಲ್ಲಾ ರೀತಿಯ ಸವಲತ್ತುಗಳನ್ನ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಗೃಹ ಸಚಿವ ಆರಗ ಜ್ಞಾನೇಂದ್ರ ಇದ್ದರು. ಇದನ್ನೂ ಓದಿ: ಪ್ರವೀಣ್ ಹತ್ಯೆ ಖಂಡಿಸಿ 19 ಮಂದಿ ಬಿಜೆಪಿ ಕಾರ್ಯಕರ್ತರು ರಾಜೀನಾಮೆ