ಚೆನ್ನೈ: ಒಟಿಪಿ ಕೊಡುವಾಗ ತಡ ಮಾಡಿದ ವಿಚಾರಕ್ಕೆ ಓಲಾ ಕ್ಯಾಬ್ ಡ್ರೈವರ್ ಪ್ರಯಾಣಿಕನನ್ನು ಹೊಡೆದು ಕೊಂದಿರುವ ಘಟನೆ ಚೆನ್ನೈನ ಹಳೆ ಮಹಾಬಳಿಪುರಂ ರಸ್ತೆಯಲ್ಲಿ ನಡೆದಿದೆ. ಗುಡುವಂಚೇರಿಯ ಉಮೇಂದರ್ ಕೊಲೆಯಾದ ವ್ಯಕ್ತಿ.
ಕೊಯಮತ್ತೂರಿನಲ್ಲಿ ಸಾಫ್ಟ್ವೇರ್ ಡೆವಲಪರ್ ಆಗಿ ಕೆಲಸ ಮಾಡಿಕೊಂಡಿದ್ದ ಉಮೇಂದರ್ ತನ್ನ ಪತ್ನಿ, ಇಬ್ಬರು ಮಕ್ಕಳು, ನಾದಿನಿ ಹಾಗೂ ಅವರ ಇಬ್ಬರು ಮಕ್ಕಳೊಂದಿಗೆ ನವಲೂರಿನ ಮಾಲ್ಗೆ ತೆರಳಿದ್ದರು. ಚಲನಚಿತ್ರ ವೀಕ್ಷಣೆ ಬಳಿಕ ಮನೆಗೆ ವಾಪಸ್ ಆಗಲು ಉಮೇಂದರ್ ಪತ್ನಿ ಓಲಾ ಕ್ಯಾಬ್ ಬುಕ್ ಮಾಡಿದ್ದರು.
ಕ್ಯಾಬ್ ಅವರಿದ್ದ ಸ್ಥಳಕ್ಕೆ ಬರುತ್ತಿದ್ದಂತೆ ಎಲ್ಲರೂ ಕ್ಯಾಬ್ ಹತ್ತಿ ಕುಳಿತಿದ್ದಾರೆ. ಇದರಿಂದ ಕೋಪಗೊಂಡ ಕ್ಯಾಬ್ ಡ್ರೈವರ್ ರವಿ, ಒಟಿಪಿ ದೃಢಪಡಿಸಿದ ಬಳಿಕವೇ ಕಾರಿನೊಳಗೆ ಕುಳಿತುಕೊಳ್ಳುವಂತೆ ಆವಾಜ್ ಹಾಕಿದ್ದ. ಇದನ್ನೂ ಓದಿ: ಊಟದ ಬಿಲ್ ಕೇಳಿದ್ದಕ್ಕೆ ಬಾಟಲ್ನಿಂದ ತಲೆಗೆ ಹೊಡೆದ್ರು – ಅಧಿಕಾರದ ಮದದಿಂದ ಡಾಬಾ ಧ್ವಂಸ
ಇದರಿಂದ ಸಿಟ್ಟಾದ ಉಮೇಂದರ್, ಕ್ಯಾಬ್ನಿಂದ ಕೆಳಗಿಳಿದು ಬಾಗಿಲನ್ನು ಬಲವಾಗಿ ಮುಚ್ಚಿದ್ದಾರೆ. ಬಳಿಕ ಇನ್ನೊಂದು ಕ್ಯಾಬ್ ಬುಕ್ ಮಾಡಲು ಹೊರಟಿದ್ದು, ಚಾಲಕ ಹಾಗೂ ಉಮೇಂದರ್ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ರವಿ ಉಮೆಂದರ್ ಮೇಲೆ ಹಲವು ಬಾರಿ ಹಲ್ಲೆ ನಡೆಸಿದ್ದು, ಇದರಿಂದ ಉಮೇಂದರ್ ಮೂರ್ಛೆತಪ್ಪಿದ್ದರು. ಬಳಿಕ ಉಮೇಂದರ್ನನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ.
ಇತ್ತ ಕ್ಯಾಬ್ ಡ್ರೈವರ್ ರವಿ ಪರಾರಿಯಾಗಲು ಯತ್ನಿಸಿದ್ದ. ಆದರೆ ಹಲ್ಲೆ ನಡೆಸಿದ ಸಮಯ ನೆರೆದಿದ್ದವರ ಕೈಗೆ ಆತ ಸಿಕ್ಕಿ ಬಿದ್ದಿದ್ದಾನೆ. ಘಟನೆ ಬಗ್ಗೆ ಕೆಲಂಬಾಕ್ಕಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪದಡಿ ರವಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮಲಗಿದ್ದ ಪತಿಯನ್ನು ಬರ್ಬರವಾಗಿ ಕೊಲೆ ಮಾಡಿ ಕತ್ತಿ ಹಿಡಿದು ಕುಳಿತ ಪತ್ನಿ