ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಯಾರೂ ಚರ್ಚೆ ಮಾಡಬಾರದು. ಇದನ್ನು ಇಲ್ಲಿಗೇ ನಿಲ್ಲಿಸಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ವಿಚಾರದಲ್ಲಿ ಸತ್ಯಾಂಶ ಇಲ್ಲ. ಬೊಮ್ಮಾಯಿ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ. ಯಾರೊಬ್ಬರ ಅದರ ಬಗ್ಗೆ ಚರ್ಚೆ ಮಾಡಬಾರದು, ಇದನ್ನು ಇಲ್ಲಿಗೆ ನಿಲ್ಲಿಸಬೇಕು ಎಂದು ಮನವಿ ಮಾಡಿಕೊಂಡರು.
ಅಮಿತ್ ಷಾ ರಾಜ್ಯ ರಾಜಕಾರಣದ ಬಗ್ಗೆ ಚರ್ಚೆ ಮಾಡಿದ್ರು ಅಷ್ಟೇ. ಆದರೆ ನಾಯಕತ್ವದ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಿರ್ಧಾರ ಆಗುತ್ತದೆ. ಇದಕ್ಕೆ ಹೈಕಮಾಂಡ್ ನಾಯಕರು ಕೂಡ ಸಹಕಾರ ಕೊಡ್ತಾರೆ. ಶಿಕಾರಿಪುರದಲ್ಲಿ ವಿಜಯೇಂದ್ರ ಸ್ಪರ್ಧೆ ಬಗ್ಗೆ ಹೇಳಿದ್ದೇನೆ. ಅಂತಿಮವಾಗಿ ಅವರ ಸ್ಪರ್ಧೆ ಬಗ್ಗೆ ತೀರ್ಮಾನ ಮಾಡೋದು ಹೈಕಮಾಂಡ್. ಆದರೆ ಶಿಕಾರಿಪುರ ಸ್ಪರ್ಧೆ ಬಗ್ಗೆ ಅಮಿತ್ ಷಾ ಜೊತೆ ನಾನು ಏನು ಚರ್ಚೆ ಮಾಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್ನವರಿಗೆ ತಲೆ ಕೆಟ್ಟಿದೆ ಅದಕ್ಕೆ ಸಿಎಂ ಬದಲಾವಣೆ ಎನ್ನುತ್ತಿದ್ದಾರೆ: ಆರಗ ಜ್ಞಾನೇಂದ್ರ
ಸಿಎಂ ಬದಲಾವಣೆ ವಿಚಾರದಲ್ಲಿ ಸತ್ಯಾಂಶ ಇಲ್ಲ. 7-8 ತಿಂಗಳು ಇರುವಾಗ ಬದಲಾವಣೆ ಇಲ್ಲ ಎಂದು ಹೇಳುವ ಮೂಲಕ ಬೊಮ್ಮಾಯಿಗೆ ಯಡಿಯೂರಪ್ಪ ಬೆಂಬಲ ವ್ಯಕ್ತಪಡಿಸಿದರು. ಕುಟುಂಬ ಸಮೇತ ಮಂತ್ರಾಲಯಕ್ಕೆ ಹೋಗ್ತಿದ್ದೇವೆ. ಬಹಳ ದಿನಗಳು ಆಯ್ತು ರಾಯರ ದರ್ಶನ ಮಾಡಿ. ನಾಳೆ ಮಂತ್ರಾಲಯ ಪ್ರವಾಸ ಮುಗಿಸಿ ವಾಪಸ್ ಬರುತ್ತೇನೆ. ಮಂತ್ರಾಲಯ ದಿಂದ ಬಂದ ನಂತರ ರಾಜ್ಯ ಪ್ರವಾಸ ಮಾಡ್ತೀನಿ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬಾರದ ರೀತಿ ನಾವು ನೋಡಿಕೊಳ್ತೇವೆ ಎಂದರು.
ಯಾರು ಸಿಎಂ ಕನಸು ಕಾಣ್ತಿದ್ದಾರೋ ಅವರ ಭ್ರಮೆ ಅಷ್ಟೇ. ಯಾವುದೇ ಕಾರಣಕ್ಕೂ ಅವರ ಆಸೆ ಈಡೇರುವುದಿಲ್ಲ. ನೂರಕ್ಕೂ ನೂರರಷ್ಟು ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.