– ಕಾಲೇಜು ವಿದ್ಯಾರ್ಥಿಗಳ ತಲೆಕೆಡಿಸಿ ತಂಡಕ್ಕೆ ಸೇರ್ಪಡೆ
ನವದೆಹಲಿ/ಬಳ್ಳಾರಿ: ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಗ್ಯಾಂಗ್ ರಾಷ್ಟ್ರೀಯ ತನಿಖಾ ದಳ(NIA) ಬಲೆಗೆ ಬಿದ್ದಿದೆ. ಐಇಡಿ (IED) ಸ್ಫೋಟಿಸಲು ಬೇಕಾಗಿದ್ದ ವಸ್ತುಗಳನ್ನು ಮನೆಯಲ್ಲಿಯೇ ಇಟ್ಟುಕೊಂಡಿದ್ದ ವಿಚಾರ ದಾಳಿ ವೇಳೆ ಬಯಲಾಗಿದೆ.
ಐಸಿಸ್ನಿಂದ ಪ್ರೇರಣೆಗೊಂಡಿದ್ದ ಬಳ್ಳಾರಿ ಯುವಕ ಸುಲೈಮನ್ ಮತ್ತು ಆತನ ಸಹಚರನನ್ನು ವಶಕ್ಕೆ ಪಡೆಯಲಾಗಿದೆ. ಬಳ್ಳಾರಿ ಐಸಿಸ್ ಮಾಡ್ಯೂಲ್ (ISIS Ballari Module) ಹೆಸರಿನಿಂದ ಗುರುತಿಸಿಕೊಂಡಿದ್ದ ಈ ತಂಡ ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ತಮ್ಮ ತಂಡಕ್ಕೆ ಸೇರಿಸಿಕೊಳ್ಳುತ್ತಿದ್ದರು.
ಕಳೆದ 5 ವರ್ಷದಿಂದ ಪಿಎಫ್ಐ (PFI) ಸಂಘಟನೆಯಲ್ಲಿ ಇದ್ದ ಬಳ್ಳಾರಿ ಮೂಲದ ಸುಲೈಮನ್ ಬಳ್ಳಾರಿ ಘಟಕವನ್ನು ಆರಂಭಿಸಿದ್ದ. ಈತನಿಗೆ ಬಳ್ಳಾರಿಯ ಸೈಯ್ಯದ್ ಸಮೀರ್ ಸಹಕಾರ ನೀಡುತ್ತಿದ್ದ. ಬೆಂಗಳೂರು ಮತ್ತು ಬಳ್ಳಾರಿ, ಉ.ಕರ್ನಾಟಕದಲ್ಲಿ ಬಾಂಬ್ ಸ್ಫೋಟಕ್ಕೆ ಇವರು ಪ್ಲ್ಯಾನ್ ಮಾಡುತ್ತಿದ್ದರು.
ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಂಡು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು. ಜಿಹಾದ್ಗೆ ಯಾರು ಗಮನ ಕೊಡುತ್ತಾರೋ ಅವರನ್ನೇ ಬಳಸಿಕೊಳ್ಳುತ್ತಿದ್ದರು. ಪಾಕಿಸ್ತಾನ, ಇರಾನ್, ಇರಾಕ್ ಪ್ರವಾಸದ ಬಳಿಕ ಜಿಹಾದಿಗಳನ್ನಾಗಿ ಮಾಡಲು ಸಂಚು ರೂಪಿಸಿದ್ದರು. ಇದನ್ನೂ ಓದಿ: ಬೆಂಗಳೂರು ಉಗ್ರರ ಪ್ರಯೋಗಾಲಯ ಆಗದಿರಲಿ: ಸರ್ಕಾರಕ್ಕೆ ಯತ್ನಾಳ್ ಎಚ್ಚರಿಕೆ
ಬಂಧಿತರಿಂದ ಸಲ್ಫರ್, ಪೊಟಾಷಿಯಂ ನೈಟ್ರೇಟ್, ಗನ್ ಪೌಡರ್, ಸಕ್ಕರೆ, ಎಥೆನಾಲ್, ಹರಿತವಾದ ಆಯುಧಗಳು, ಹಣ, ರಹಸ್ಯ, ಮಾಹಿತಿಯ ದಾಖಲೆಗಳು, ಸ್ಮಾರ್ಟ್ಫೋನ್, ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.
ತನಿಖೆ ಚುರುಕು: ಬೆಂಗಳೂರಲ್ಲಿ ಎನ್ಐಎ ದಾಳಿ ವೇಳೆ ಸೋಡಿಯಂ ನೈಟ್ರೇಟ್ ಪತ್ತೆ ಪ್ರಕರಣ ಸಂಬಂಧ ತನಿಖೆ ಚುರುಕುಗೊಂಡಿದೆ. 7 ಕೆಜಿ ಸೋಡಿಯಂ ನೈಟ್ರೇಟ್ ಮನೆಗೆ ತಂದಿದ್ದ ಸಮೀವುಲ್ಲಾಗೆ ಡ್ರಿಲ್ ಹೆಚ್ಚಾಗಿದೆ. ಸೋಡಿಯಂ ನೈಟ್ರೇಟ್ ಡೀಲಿಂಗ್ ಹಿಂದಿರೋ ರಹಸ್ಯವನ್ನು ಎನ್ಐಎ ರಿವೀಲ್ ಮಾಡಿದೆ.
ಹೈದರಾಬಾದ್ ಲಿಂಕ್ನಿಂದ ಎನ್ಐಎ ಬೆಂಗಳೂರು ಬ್ಯಾಡರಹಳ್ಳಿ ಕದ ತಟ್ಟಿತ್ತು. ಬ್ಯಾಡರಹಳ್ಳಿಯ ಬಾಡಿಗೆ ಮನೆಯಲ್ಲಿ ಸಮೀವುಲ್ಲಾ ಸೋಡಿಯಂ ನೈಟ್ರೇಟ್ ತಂದಿಟ್ಟುಕೊಂಡಿದ್ದ. ಸಮೀವುಲ್ಲಾ ಬಳ್ಳಾರಿಯವನಾಗಿದ್ದು ಎಲ್ಎಲ್ಬಿ ಪದವೀಧರ. ಸದ್ಯ ಸಮೀವುಲ್ಲಾ ರೂಮ್ಮೆಟ್ಗಳಾದ ಮುನಿರುದ್ದೀನ್, ಮಿಸ್ಬಾ ಹಾಗೂ ಅಲ್ತಾಫ್ ಸಹ ವಿಚಾರಣೆ ನಡೆಸಲಾಗುತ್ತಿದೆ. ಅರೆಸ್ಟ್ ಆದ ಶಂಕಿತರೆಲ್ಲರೂ ಬಳ್ಳಾರಿ ಮೂಲದ ಯುವಕರಾಗಿದ್ದಾರೆ. ಈ ಗ್ಯಾಂಗ್ ಐಇಡಿ ಸ್ಫೋಟ ಮಾಡಲು ತಯಾರಿ ನಡೆಸಿತ್ತಾ ಎಂಬ ಅನುಮಾನ ಬಂದಿದೆ.