ನವದೆಹಲಿ: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದ (Rameshwaram Cafe Bomb Blast) ನಡೆದ ಬರೋಬ್ಬರಿ 42 ದಿನಗಳ ಬಳಿಕ ಬಾಂಬರ್ ಮುಸಾವೀರ್ ಹುಸೇನ್ (Mussavir Hussain Shazeb) ಮತ್ತು ಸೂತ್ರಧಾರ ಅಬ್ದುಲ್ ಮತೀನ್ ತಾಹಾನನ್ನು (Abdul Matheen Taha) ರಾಷ್ಟ್ರೀಯ ತನಿಖಾ ದಳ (NIA) ಹೆಡೆಮುರಿ ಕಟ್ಟಿದೆ.
ಖಚಿತ ಸುಳಿವಿನ ಆಧಾರದ ಮೇಲೆ ಪೂರ್ವ ಮಿಡ್ನಾಪುರದ ಕಾಂತಿ ಪಟ್ಟಣದಲ್ಲಿ ನಸುಕಿನ ಜಾವ ಮನೆಯೊಂದರ ಮೇಲೆ ಎನ್ಐಎ ದಾಳಿ ನಡೆಸಿದೆ. ಗಾಢ ನಿದ್ದೆಯಲ್ಲಿದ್ದ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದೆ.
ಅಸ್ಸಾಂನಲ್ಲಿ ಕೆಲ ದಿನ ತಲೆ ಮರೆಸಿಕೊಂಡಿದ್ದ ಆರೋಪಿಗಳು ಇತ್ತೀಚಿಗೆ ಬಂಗಾಳಕ್ಕೆ ಶಿಫ್ಟ್ ಆಗಿದ್ದರು. ಮಾರ್ಚ್ 1ರಂದು ಸ್ಫೋಟ ನಡೆದ ದಿನವೇ ಬೆಂಗಳೂರಿನಿಂದ ಬಳ್ಳಾರಿ ಮಾರ್ಗವಾಗಿ ಬಾಂಬರ್ ಮುಸಾವೀರ್ ಪರಾರಿಯಾಗಿದ್ದ. ಆದರೆ ಮುಸಾವೀರ್ ಸಂಪೂರ್ಣ ಚಲನವಲನ ಹಲವು ಸಿಸಿಟಿವಿಗಳಲ್ಲಿ ಸೆರೆಯಾಗಿತ್ತು. ಮುಸಾವೀರ್ ಧರಿಸಿದ್ದ ಟೋಪಿ ಆಧಾರದ ಮೇಲೆ ಆರೋಪಿಯನ್ನು ಪೊಲೀಸರು ಗುರುತಿಸಿದ್ದರು.
ವಿದೇಶಕ್ಕೆ ಪರಾರಿಯಾಗಿದ್ದಾನೆ ಎನ್ನಲಾಗಿದ್ದ ಸೂತ್ರಧಾರ ಮತೀನ್ ವಿಘ್ನೇಶ್ ಹೆಸರಿನಲ್ಲಿ ದೇಶದ ಒಳಗಡೆಯೇ ತಲೆಮರೆಸಿಕೊಂಡಿದ್ದ. ಮುಸಾವಿರ್ ಪದೇ ಪದೇ ಸಿಮ್ ಬದಲಿಸುತ್ತಾ, ಸ್ಥಳ ಬದಲಿಸುತ್ತಾ ತನಿಖೆಯ ಹಾದಿ ತಪ್ಪಿಸಲು ನೋಡಿದ್ದ. ಇಬ್ಬರು ಜೊತೆಗೂಡಿ ನಕಲಿ ದಾಖಲೆ ನೀಡಿ ಕಡಿಮೆ ದರ್ಜೆಯ ಹೋಟೆಲ್ನಲ್ಲಿ ತಂಗಿದ್ದರು. ಕೊನೆಗೆ ಕಾಂತಿ ಪಟ್ಟಣದ ಹೊರವಲಯದಲ್ಲಿ ಬಾಡಿಗೆಗೆ ಮನೆ ಪಡೆದಿದ್ದರು.
ಆರೋಪಿಗಳು ಬೇರೆ ಹೆಸರಲ್ಲಿ ಕೋಲ್ಕತ್ತಾದಲ್ಲಿ ಮಾರ್ಚ್ 13, 14ರಂದು ಹೋಟೆಲ್ ರೂಮ್ ಬುಕ್ ಮಾಡಿದ್ದರು. ಯುಶಾ ಶಾಹನವಾಜ್, ಅನ್ಮೋಲ್ ಕುಲಕರ್ಣಿ ಹೆಸರಲ್ಲಿ ಬುಕ್ ಮಾಡಿದ್ದ ಆರೋಪಿಗಳು ಎರಡು ದಿನ ಹೋಟೆಲ್ನಲ್ಲಿ ತಂಗಿದ್ದರು. ಇದನ್ನೂ ಓದಿ : 370 ವಿಧಿಯನ್ನು ರದ್ದುಪಡಿಸಿದ್ದಕ್ಕೆ ಅಂಬೇಡ್ಕರ್ ಆತ್ಮ ನನ್ನನ್ನು ಆಶೀರ್ವದಿಸುತ್ತಿರಬಹುದು: ಮೋದಿ
ಇಂದು ಪೂರ್ವ ಮಿಡ್ನಾಪುರ ಕೋರ್ಟ್ ಮುಂದೆ ಪಾತಕಿಗಳನ್ನು ಹಾಜರುಪಡಿಸಿದ ಬಳಿಕ ಬೆಂಗಳೂರಿಗೆ ಎನ್ಐಎ ಕರೆತರಲಿದೆ. ಅಂದ ಹಾಗೇ ಇದೇ ಏ.6 ರಂದು ಪೂರ್ವ ಮಿಡ್ನಾಪುರದಲ್ಲಿ ಎನ್ಐಎ ಮಿಡ್ನೈಟ್ ಆಪರೇಷನ್ಗೆ ಮುಂದಾಗಿತ್ತು. 2 ವರ್ಷದ ಹಿಂದಿನ ಸ್ಪೋಟ ಪ್ರಕರಣದ ಆರೋಪಿಗಳನ್ನು ಬಂಧಿಸಲು ಮುಂದಾದಾಗ ಸ್ಥಳೀಯರು ತಿರುಗಿಬಿದ್ದಿದ್ದರು.
ವಿವಿಧ ಕೇಂದ್ರ ತನಿಖಾ ಸಂಸ್ಥೆಗಳು ಮತ್ತು ಕರ್ನಾಟಕ, ಪಶ್ಚಿಮ ಬಂಗಾಳ, ತಮಿಳುನಾಡು, ಯುಪಿ, ದೆಹಲಿ, ಎಪಿ ಮತ್ತು ತೆಲಂಗಾಣ ರಾಜ್ಯ ಪೊಲೀಸ್ ಇಲಾಖೆಗಳ ಸಹಕಾರದಿಂದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇದನ್ನೂ ಓದಿ : ಕೇವಲ 2 ವೋಟಿಗಾಗಿ ಕಾಡು ಹಾದಿಯಲ್ಲಿ 107 ಕಿಮೀ ಸಾಗಿದ ಅಧಿಕಾರಿಗಳು
ಯಾರು ಮುಸಾವೀರ್?
ಶಿವಮೊಗ್ಗದ ತೀರ್ಥಹಳ್ಳಿ ಮೂಲದ ಐಸಿಸ್ ತೀರ್ಥಹಳ್ಳಿ ಮಾಡ್ಯೂಲ್ನ ಪ್ರಮುಖ ವ್ಯಕ್ತಿ. ರಾಮೇಶ್ವರಂ ಕೆಫೆಯಲ್ಲಿ ಇಡ್ಲಿ ತಿಂದು ಬಾಂಬಿಟ್ಟು ಮುಸಾವೀರ್ ಹುಸೇನ್ ಪರಾರಿಯಾಗಿದ್ದ.
ಯಾರು ಅಬ್ದುಲ್ ಮತೀನ್?
ಕೆಫೆ ಸ್ಫೋಟ ಕೇಸ್ನ ಮಾಸ್ಟರ್ಮೈಂಡ್ ಆಗಿರುವ ಈತ ಅಲ್ ಹಿಂದ್ ಸಂಘಟನೆಯ ಪ್ರಮುಖ ಸದಸ್ಯನಾಗಿದ್ದಾನೆ. ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿಯಾಗಿದ್ದ ಈತ ಬ್ರಾಡ್ಬ್ಯಾಂಡ್ ಕಂಪನಿಯಲ್ಲಿ ಕೆಲಸ ಮಾಡಿದ್ದ ಈತ ಫುಟ್ಪಾತ್ನಲ್ಲಿ ಬಟ್ಟೆ ವ್ಯಾಪಾರ ಮಾಡಿದ್ದ. ಡಾರ್ಕ್ ವೆಬ್ ಬಳಕೆಯಲ್ಲಿ ಪರಿಣಿತನಾಗಿರುವ ಈತ 2020 ರಿಂದ ನಾಪತ್ತೆಯಾಗಿದ್ದಾನೆ. ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣದ ಕಿಂಗ್ಪಿನ್ ಆಗಿದ್ದು ಈಗ ಜೈಲಿನಲ್ಲಿ ಇರುವ ಶಾಕೀರ್ಗೆ ಬಾಂಬ್ ತಯಾರಿಸಲು ತರಬೇತಿ ನೀಡಿದ್ದ.