ಹುಬ್ಬಳ್ಳಿ: ಆರತಕ್ಷತೆಯ ಸಿದ್ಧತೆಯಲ್ಲಿದ್ದ ನವ ವಿವಾಹಿತೆಯನ್ನು ಕಿಡ್ನಾಪ್ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಸಹನಾ ಅವರು ಮನೆಯವರ ವಿರೋಧದ ನಡುವೆ ತಾನು ಪ್ರೀತಿಸಿದ ನಿಖಿಲ್ ದಾಂಡೇಲಿ ಅವರನ್ನು ಮದುವೆಯಾಗಿದ್ದಳು. ಕಳೆದ ಏಳು ತಿಂಗಳ ಹಿಂದೇ ಮದುವೆ ನೊಂದಣಿ ಮಾಡಿಕೊಂಡಿದ್ದ ಈ ಜೋಡಿ, ಇದೇ ಜೂನ್ 26ರಂದು ಆರಕ್ಷತೆ ಕಾರ್ಯಕ್ರಮವನ್ನು ಸಹ ಇಟ್ಟುಕೊಂಡಿತ್ತು. ಈ ಹಿನ್ನೆಲೆ ವಿರೋಧವಿದ್ದರೂ ತಂದೆ-ತಾಯಿಯ ಆಶೀರ್ವಾದ ಪಡೆಯಲು ಸಹನಾ ತವರಿಗೆ ಹೋಗಿದ್ದಳು. ಹುಬ್ಬಳ್ಳಿಯ ಅಕ್ಷಯ್ ಪಾರ್ಕ್ ಬಳಿಯಿರುವ ಪೋಷಕರ ಮನೆಯಲ್ಲಿದ್ದ ಸಹನಾಳನ್ನು, ಕಾರ್ಪೋರೇಟರ್ ಕಂ ರೌಡಿ ಶೀಟರ್ ಚೇತನ್ ಹೀರೇಕೆರೂರು ಮತ್ತು ಯುವತಿ ತಂದೆ ಶಿವು ಹೀರೆಕೇರೂರ ಬೆದರಿಕೆ ಹಾಕಿ ಕಿಡ್ನಾಪ್ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಅಮರನಾಥ ಯಾತ್ರೆಗೆ ಎರಡೇ ದಿನ: ಯಾತ್ರಾರ್ಥಿಗಳಿಗೆ ಆಧಾರ್, ಸರ್ಕಾರಿ ಗುರುತಿನ ಚೀಟಿ ಕಡ್ಡಾಯ
ತವರಿಗೆ ಹೋದ ಮಡದಿ ವಾಪಸು ಬಾರದ ಹಿನ್ನೆಲೆ ಪತಿ ನಿಖಿಲ್ ಸಾಕಷ್ಟು ಬಾರಿ ಸಹನಾಳಿಗೆ ಕರೆ ಮಾಡಿದ್ದಾರೆ. ಪ್ರತಿ ಸಾರಿಯೂ ಪತ್ನಿಯ ಫೋನ್ ಸ್ವಿಚ್ ಆಫ್ ಬಂದಿದೆ. ಇದರಿಂದ ಗಾಬರಿಯಾದ ನಿಖಿಲ್, ಆಕೆಯ ತಂದೆಯ ಮನೆಗೆ ತೆರಳಿ ವಿಚಾರಿಸಿದ್ದಾನೆ. ಪಾಲಕರಿಂದ ಹಾರಿಕೆ ಉತ್ತರ ಬಂದಿದೆ. ಇದರ ನಡುವೆ ಸಹನಾಳ ಸಂಬಂಧಿ ಕಾರ್ಪೋರೇಟರ್ ಕಂ ರೌಡಿ ಶೀಟರ್ ಚೇತನ್ ಹೀರೇಕೆರೂರು ಮೊದಲಿನಿಂದಲೂ ಈ ಮದುವೆಗೆ ವಿರೋಧ ಮಾಡುತ್ತಿದ್ದ. ಇದರಿಂದ ಅನುಮಾನಗೊಂಡ ನಿಖಿಲ್ ಸಹನಾ ಕುಟುಂಬಸ್ಥರು ಮತ್ತು ಚೇತನ್ ಹೀರೆಕೇರೂರ ವಿರುದ್ಧ ಗೋಕುಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾದ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ಸಹನಾ ಗೋವಾದಲ್ಲಿ ಇರುವುದನ್ನು ಪತ್ತೆಹಚ್ಚಿ, ಆಕೆಯನ್ನು ವಾಪಸ್ಸು ಕರೆತಂದಿದ್ದಾರೆ. ಇದನ್ನೂ ಓದಿ: ಅಮರನಾಥ ಯಾತ್ರೆಗೆ ಕೆಲವೇ ದಿನ – ಗಡಿಯಲ್ಲಿ ಶೋಧ ಕಾರ್ಯ ಚುರುಕು
ವಾಪಸ್ಸಾದ ಮೇಲೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಸಹನಾ ಮನೆಗೆ ತೆರಳಿದ್ದ ವೇಳೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗುವ ನೆಪದಲ್ಲಿ ತಮ್ಮನ್ನು ಗೋವಾಕ್ಕೆ ಕರೆದೊಯ್ದು, ಮೊಬೈಲ್ ಸಹ ಕಿತ್ತುಕೊಳ್ಳಲಾಗಿದೆಯಂತೆ. ಇದೆಲ್ಲವನ್ನೂ ನೋಡಿದರೆ ಸ್ವತಃ ಯುವತಿಯ ತಂದೆಯೇ ವಿಲನ್ ಅಂತ ಅನಿಸಿದರೂ ಯುವತಿ ಮಾತ್ರ ತನ್ನ ತಂದೆ ಶಿವು ಹೇರೇಕೆರೂರ ನಿರಾಪರಾಧಿ. ಎಲ್ಲದಕ್ಕೂ ಪಾಲಿಕೆ ಸದಸ್ಯ ಚೇತನ್ ಹಿರೇಕೆರೂರು ಕಾರಣ ಅಂತ ನೇರ ಆರೋಪ ಮಾಡುತ್ತಿದ್ದಾಳೆ. ಅಲ್ಲದೇ ಈಗ ಎಲ್ಲ ಹಿರಿಯರೂ ಸೇರಿ ಅವರಿಬ್ಬರ ಮದುವೆಗೆ ಒಪ್ಪಿಗೆ ನೀಡಿದ್ದಾರೆ. ಆದರೆ ನಿಖಿಲ್ ದಾಂಡೇಲಿ ಜೊತೆ ಸಹನಾಳ ಮದುವೆ ಮಾಡಿಸುವುದು ಸಂಬಂಧಿ ಚೇತನ್ ಹೀರೆಕೇರೂರುಗೆ ಇಷ್ಟ ಇರಲಿಲ್ಲ. ಹೀಗಾಗಿ ಈ ರೀತಿ ಸೀನ್ ಕ್ರಿಯೇಟ್ ಮಾಡಿದ್ದಾರೆ ಎನ್ನುವ ಪಿಸುಮಾತುಗಳು ಕೇಳಿ ಬರುತ್ತಿವೆ. ಈ ಮಧ್ಯೆ ಈ ಚೇತನ್ ಮೇಲೆ ಕಿಡ್ನಾಪ್ ಕೇಸ್ ದಾಖಲು ಸಹ ಆಗಿದೆ. ಆದರೆ ಪೊಲೀಸರು ಮಾತ್ರ ಸಹನಾಳನ್ನು ಹುಡುಕಲು ತೆಗೆದುಕೊಂಡ ಆಸಕ್ತಿಯನ್ನು ಚೇತನ್ ಬಂಧಿಸಲು ತೋರುತ್ತಿಲ್ಲ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.