ಶ್ರೀನಗರ: ಅಮರನಾಥ ಯಾತ್ರೆಗೆ ಕೆಲವೇ ದಿನಗಳಿರುವ ಹಿನ್ನೆಲೆ ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ(ಐಬಿ) ಉದ್ದಕ್ಕೂ ಬೃಹತ್ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಅಮರನಾಥ ಯಾತ್ರೆಯ ಗಡಿಯಾಚೆಗಿನ ಸುರಂಗಗಳಲ್ಲಿ ಭಯೋತ್ಪಾದಕರು ಒಳನುಸುಳುವಿಕೆ ಯತ್ನಗಳನ್ನು ತಡೆಯಲು ಭದ್ರತಾ ಪಡೆ ಐಬಿ ಉದ್ದಕ್ಕೂ ಕಾರ್ಯಾಚರಣೆಯನ್ನು ನಡೆಸುತ್ತಿದೆ.
ಪೊಲೀಸರು, ಸಿಆರ್ಪಿಎಫ್ ಮತ್ತು ಬಿಎಸ್ಎಫ್ ಜಂಟಿಯಾಗಿ ಸಾಂಬಾ, ಕಥುವಾ ಮತ್ತು ಜಮ್ಮು ಜಿಲ್ಲೆಗಳ ಗ್ರಾಮಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅಮರನಾಥ ಯಾತ್ರೆ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಮೂವರು ಉಗ್ರರ ಹತ್ಯೆ
ಯಾತ್ರೆ ಯಾವಾಗ?
43 ದಿನಗಳ ಅಮರನಾಥ ಯಾತ್ರೆಯು ಜೂನ್ 30 ರಂದು ಎರಡು ಮಾರ್ಗಗಳಿಂದ ಪ್ರಾರಂಭವಾಗಲಿದೆ. ಮೊದಲನೆಯದು ದಕ್ಷಿಣ ಕಾಶ್ಮೀರದ ಪಹಲ್ಗಾಮ್ನ 48 ಕಿಮೀ ನುನ್ವಾನ್ ಮತ್ತು ಎರಡನೆಯದು ಮಧ್ಯ ಕಾಶ್ಮೀರದ ಗಂದರ್ಬಾಲ್ನ ಬಾಲ್ಟಾಲ್ನಿಂದ 14 ಕಿಮೀವರೆಗೂ ಭಕ್ತಾದಿಗಳು ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.
ಅಮರನಾಥ ಯಾತ್ರಿಕರ ಮೇಲೆ ದಾಳಿ ನಡೆಸಲು ಮುಂದಾಗಿದ್ದ ಕೆಲ ಉಗ್ರರನ್ನು ಈಗಾಗಲೇ ಸೇನೆ ಕಾರ್ಯಾಚರಣೆ ನಡೆಸಿ ಹತ್ಯೆ ಮಾಡಿದೆ. ಹೀಗಿದ್ದರೂ ಯಾತ್ರಿಕರ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಐಬಿ ಉದ್ದಕ್ಕೂ ತೀವ್ರ ಶೋಧ ಕಾರ್ಯಾಚರಣೆಯನ್ನು ಮಾಡಲಾಗುತ್ತಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಭಾರದ್ವಾಜ್ ವಿವರಿಸಿದ್ದಾರೆ.
ಕೋವಿಡ್ ಹಿನ್ನೆಲೆ ಕಳೆದ ಎರಡು ವರ್ಷಗಳಿಂದ ಅಮರಾನಾಥ ಯಾತ್ರೆಗೆ ಸರ್ಕಾರ ಅನುಮತಿ ನೀಡಿರಲಿಲ್ಲ. ಈಗ ಕೋವಿಡ್ ನಿಯಂತ್ರಣಕ್ಕೆ ಬಂದಿರುವುದಕ್ಕೆ ಸರ್ಕಾರ ಮತ್ತೆ ಯಾತ್ರೆಗೆ ಅನುಮತಿ ಕೊಟ್ಟಿದೆ.