ಮೈಸೂರು: ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅಭ್ಯರ್ಥಿಗಳೇ ಇಲ್ಲ ಎಂದರೇ ಅರ್ಥವೇನು? ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ಗೆ ಮಾನ ಮರ್ಯಾದೆ ಇಲ್ವಾ ಎಂದು ಮಾಜಿ ಸಂಸದ ವಿಶ್ವನಾಥ್ ಮೈಸೂರಿನಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಒಂದು ಕಾಲದಲ್ಲಿ ಶ್ರೀನಿವಾಸ್ ಪ್ರಸಾದ್ ಗೆದ್ದಿದ್ದು ಕಾಂಗ್ರೆಸ್ ನಿಂದಲೇ, ಈಗ ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಅಭ್ಯರ್ಥಿ ಇಲ್ಲ ಎಂದು ಜೆಡಿಎಸ್ ನ ಕಳಲೆ ಕೇಶವಮೂರ್ತಿಯನ್ನು ಕಾಂಗ್ರೆಸ್ ಅಭ್ಯರ್ಥಿ ಎಂದು ಓಡಾಡುತ್ತಿದ್ದಾರೆ. ಆ ಕಳಲೆ ಇನ್ನೂ ಕಾಂಗ್ರೆಸ್ ಪಕ್ಷವನ್ನು ಸೇರಿಲ್ಲ. ಇದನ್ನೆಲ್ಲಾ ನೋಡಿಕೊಂಡು ಸುಮ್ಮನಿರುವ ಪರಮೇಶ್ವರ್ ಗೆ ಮಾನ ಮರ್ಯಾದೆ ಇದೆಯಾ ಎಂದು ಅವರು ಪ್ರಶ್ನಿಸಿ ಕಿಡಿಕಾರಿದ್ದಾರೆ.
ಎಸ್.ಎಂ.ಕೃಷ್ಣ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿದ ವಿಶ್ವನಾಥ್, ಅವರ ಮನಸ್ಸಿಗೆ ನೋವಾಗಿದೆ ಹಾಗೂ ಗೌರವಕ್ಕೆ ಚ್ಯುತಿ ಬಂದಿದೆ ಎಂದು ಕಾಂಗ್ರೆಸ್ ತೊರೆದಿದ್ದಾರೆ. ಅವರ ಆ ಮಾತುಗಳು ಸಾಕಷ್ಟು ಅರ್ಥದಿಂದ ಕೂಡಿವೆ. ಆದರೂ ಕಾಂಗ್ರೆಸ್ ಪಕ್ಷಕ್ಕೆ ಯಾರು ಅನಿವಾರ್ಯವಲ್ಲ. ಎಲ್ಲರಿಗೂ ಕಾಂಗ್ರೆಸ್ ಪಕ್ಷ ಅನಿವಾರ್ಯವಿದೆ. ಕೃಷ್ಣ ಅವರಿಗೆ ಕಾಂಗ್ರೆಸ್ ಪಕ್ಷ ರಾಷ್ಟ್ರಾಧ್ಯಕ್ಷ ಹಾಗೂ ಪ್ರಧಾನಿ ಮಂತ್ರಿ ಎರಡು ಹುದ್ದೆಯನ್ನು ಬಿಟ್ಟು ಎಲ್ಲವನ್ನು ನೀಡಿದೆ, ಹಾಗೇ ನೋಡಿದರೆ ಕೃಷ್ಣ ಅವರು ಮೂಲ ಕಾಂಗ್ರೆಸಿಗರಲ್ಲ, ನಾನು ಕಾಂಗ್ರೆಸ್ ಮಾತ್ರ ಬಿಡುತ್ತಿದ್ದು ಸಕ್ರೀಯ ರಾಜಕೀಯವನ್ನಲ್ಲ ಎಂಬ ಅವರು ಹೇಳಿಕೆಯಲ್ಲಿ ಬಹಳ ಅರ್ಥವಿದೆ. ಮುಂದೆ ಏನ್ ಆಗುತ್ತೆ ಎನ್ನುವುದನ್ನು ಕಾದು ನೋಡೋಣ ಎಂದು ಹೇಳಿದರು.
ಜಾಫರ್ ಷರೀಫ್ ಹೇಳಿಕೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಅವರನ್ನು ಏನ್ ಬೇಕಾದರೂ ಟೀಕೆ ಮಾಡಿ, ಆದರೆ ಅವರ ಜಾತಿಯನ್ನು ಟೀಕಿಸಬೇಡಿ. ಇದು ಕಿರುಬ ಸರ್ಕಾರ ಎಂದು ಹೇಳುತ್ತಿರಲ್ಲ, ಆಗಿದ್ದರೆ ಸರ್ಕಾರದಲ್ಲಿ ಎಷ್ಟು ಜನ ಕುರುಬರಿದ್ದಾರೆ ಹಾಗೂ ಎಷ್ಟು ಕುರುಬ ಅಧಿಕಾರಿಗಳಿದ್ದಾರೆ ಎಂದು ಪ್ರಶ್ನಿಸಿ ತಿರುಗೇಟು ನೀಡಿದರು.