ಮೈಸೂರು: ಪೋಷಕರ ಜೊತೆಯಲ್ಲೇ ಇದ್ದ ಮಗು ನಾಪತ್ತೆ ಆದ ಪ್ರಕರಣ ಈಗ ಸುಖಾಂತ್ಯಗೊಂಡಿದೆ. ಮೈಸೂರಿನ ಹುಣಸೂರು ಪೊಲೀಸರು ಕಾರ್ಯಾರಣೆ ನಡೆಸಿ ಮಗು ಅಪಹರಿಸಿದವನನ್ನು ಬಂಧಿಸಿದ್ದಾರೆ.
ಅಡಗೂರು ಮಾರಗೌಡನಹಳ್ಳಿ ಪ್ರವೀಣ್ ಬಂಧಿತ ಆರೋಪಿ. ಎರಡು ದಿನಗಳ ಹಿಂದೆ ಮೈಸೂರು ಜಿಲ್ಲೆ ಹುಣಸೂರು ಬಸ್ ನಿಲ್ದಾಣದಲ್ಲಿ ಆರೋಪಿ ಮಗುವನ್ನು ಅಪಹರಿಸಿದ್ದಾನೆ. ಆರೋಪಿ ಪ್ರವೀಣ್ ಸುರೇಶ್-ನೀಲಕಲಾ ದಂಪತಿಯ ಹೆಣ್ಣು ಮಗುವನ್ನು ಪೋಷಕರಿಗೆ ಗೊತ್ತಾಗದಂತೆ ಕರೆದುಕೊಂಡು ಹೋಗಿದ್ದ.
ಪ್ರವೀಣ್ ಮಗುವನ್ನು ಅಪಹರಿಸಿ ಬಳಿಕ ಆಕೆಯನ್ನು ತನ್ನ ಮನೆಯಲ್ಲಿ ಇರಿಸಿಕೊಂಡಿದ್ದನು. ಮಗು ನಾಪತ್ತೆ ಬಗ್ಗೆ ಮಾಧ್ಯಮದಲ್ಲಿ ವರದಿ ನೋಡಿ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಪೊಲೀಸರು ಗ್ರಾಮಕ್ಕೆ ತೆರಳಿ ಮಗುವನ್ನು ರಕ್ಷಿಸಿದ್ದಾರೆ. ಪೊಲೀಸರು ಆರೋಪಿ ಪ್ರವೀಣ್ನನ್ನು ವಶಕ್ಕೆ ಪಡೆದಿದ್ದು, ಮತ್ತೊಬ್ಬ ಆರೋಪಿ ಗುರು ಬಸವ ಪರಾರಿ ಆಗಿದ್ದಾನೆ.
ಏನಿದು ಪ್ರಕರಣ?
ಶ್ರೇಯಾ(3) ನಾಪತ್ತೆಯಾದ ಮಗು. ಸುರೇಶ್ ಹಾಗೂ ನೀಲಕಲಾ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದ ನಿವಾಸಿಗಳಾಗಿದ್ದು, ಸೋಮವಾರ ಮಧ್ಯಾಹ್ನ ಜಿಲ್ಲೆಯ ಹುಣಸೂರು ಬಸ್ ನಿಲ್ದಾಣದಲ್ಲಿ ಹೆಣ್ಣು ಮಗು ನಾಪತ್ತೆ ಆಗಿತ್ತು. ಕೊಪ್ಪದಿಂದ ಮೈಸೂರಿನ ಹೂಟಗಳ್ಳಿಗೆ ಹೋಗುವ ವೇಳೆ ಈ ಘಟನೆ ನಡೆದಿತ್ತು. ಸುರೇಶ್ ಹಾಗೂ ನೀಲಕಲಾ ಮೂವರು ಮಕ್ಕಳ ಜೊತೆ ಹೋಗುತ್ತಿದ್ದರು. ಹುಣಸೂರು ಬಸ್ ನಿಲ್ದಾಣದಿಂದ ಪೋಷಕರಿಗೆ ಗೊತ್ತಾಗದಂತೆ ಯಾರೋ ಮಗುವನ್ನು ಕರೆದುಕೊಂಡು ಹೋಗಿದ್ದರು ಎಂದು ಶಂಕಿಸಲಾಗಿತ್ತು.
ಈ ಬಗ್ಗೆ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv