ಹುಬ್ಬಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮಂಗಳವಾರ ಗದ್ದಲವೋ ಗದ್ದಲ. ನಟಿ ರಾಗಿಣಿಗಾಗಿ ಪಾಲಿಕೆ ಸದಸ್ಯರು ಕಿತ್ತಾಡಿಕೊಂಡು ಸಭೆಯನ್ನು ಅಲ್ಲೋಲ ಕಲ್ಲೋಲ ಮಾಡಿದ್ದಾರೆ. ಮತ್ತೊಂದೆಡೆ ಕುಡಿಯುವ ನೀರಿಗಾಗಿ ಸಭೆ ರಣಾಂಗಣವಾಗಿತ್ತು.
ಮಂಗಳವಾರ ಹುಬ್ಬಳ್ಳಿಯಲ್ಲಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ನಡೆಯಿತು. ಪಾಲಿಕೆ ಸಭೆ ಆರಂಭವಾದಾಗಿನಿಂದ ಶುರುವಾದ ಗದ್ದಲ, ಸಭೆ ಮುಗಿಯುವವರೆಗು ಗದ್ದಲವೋ ಗದ್ದಲ. ಅವಳಿ ನಗರದ ಅಭಿವೃದ್ಧಿ ವಿಚಾರವಾಗಿ ಸಭೆಯಲ್ಲಿ ಚರ್ಚೆಯಾಗಬೇಕಿತ್ತು. ಆದರೆ ಪಾಲಿಕೆ ಸದಸ್ಯರು ಚಿತ್ರನಟಿ ರಾಗಿಣಿ ವಿಷಯಕ್ಕೆ ಕಿತ್ತಾಡಿಕೊಂಡಿದ್ದಾರೆ.
ಅಕ್ಟೋಬರ್ ತಿಂಗಳಿನಲ್ಲಿ ಸ್ವಚ್ಚತೆಯ ಅರಿವು ಮೂಡಿಸಲು, ನಟಿ ರಾಗಿಣಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ರಾಯಭಾರಿಯಾಗಿ ಆಗಮಿಸಿದ್ದರು. ಇದರ ವೆಚ್ಚ 1 ಲಕ್ಷ 80 ಸಾವಿರ ಹಣವನ್ನು ಪಾಲಿಕೆ ಭರಿಸಬೇಕೆಂದು ಸದಸ್ಯ ಶಿವಾನಂದ್ ಮುತ್ತಣ್ಣ ಸಭೆಯಲ್ಲಿ ಪ್ರಸ್ತಾಪ ಮಾಡುತ್ತಿದ್ದಂತೆ ಉಳಿದ ಸದಸ್ಯರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಗಿಣಿ ಬಂದಾಗಿನ ವೆಚ್ಚವನ್ನು ಪಾಲಿಕೆ ಭರಿಸಬಾರದೆಂದು ಕೆಲ ಸದಸ್ಯರು ಹೇಳುತ್ತಿದ್ದಂತೆ ಸಭೆಯಲ್ಲಿ ಗದ್ದಲ ಶುರುವಾಗಿದೆ. ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಸಭೆಯನ್ನೆ ಮೊಟಕುಗೊಳಿಸಲಾಯಿತು.
ಮುಂಜಾನೆ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ರೊಚ್ಚಿಗೆದ್ದಿದ್ದ ಪಾಲಿಕೆ ಸದಸ್ಯರು ಕುಡಿಯುವ ನೀರಿನ್ನು ಸಮರ್ಪಕವಾಗಿ ನೀಡುತ್ತಿಲ್ಲವೆಂದು ಗಲಾಟೆ ಮಾಡಿದ್ದಾರೆ. ನವನಗರ ಹಾಗೂ ಧಾರವಾಡ ಭಾಗದಲ್ಲಿ 10 ರಿಂದ 15 ದಿನವಾದರು ಸರಿಯಾಗಿ ನೀರು ಸಿಗುತ್ತಿಲ್ಲ. ಕಳೆದ ಮೂರು ತಿಂಗಳಿನಿಂದ ಸಮಸ್ಯೆ ಬಗ್ಗೆ ಹೇಳುತ್ತಿದ್ದರೂ ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲವೆಂದು ಜಲಮಂಡಳಿ ಅಧಿಕಾರಿಗಳನ್ನು ಸದಸ್ಯರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಸಭೆಯ ಬಾವಿಗಿಳಿದು ಆಕ್ರೋಶ ಹೊರಹಾಕಿದ್ದಾರೆ. ಸದಸ್ಯರ ಗಲಾಟೆಯಿಂದಾಗಿ ಸಭೆ ಅಕ್ಷರಶಃ ರಣರಂಗಣವಾಗಿತ್ತು. ಕುಡಿಯುವ ನೀರನ್ನು ಕೊಡಲಾಗದ ಅಧಿಕಾರಿಗಳನ್ನು ಕಿತ್ತೊಗೆಯಿರಿ ಎಂದು ಗಲಾಟೆ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv