ಮೈಸೂರು: ಗಜಪಡೆ ಮಾವುತರು ಹಾಗೂ ಕಾವಾಡಿಗಳ ಕುಟುಂಬಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಅವರು ಉಪಹಾರದ ವ್ಯವಸ್ಥೆ ಮಾಡಿದ್ದಾರೆ.
ಆಯುಧ ಪೂಜೆವಿರುವ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಗಜಪಡೆ ಮಾವುತರು ಹಾಗೂ ಕಾವಾಡಿಗಳ ಕುಟುಂಬ ಅರಮನೆ ಆವರಣದಲ್ಲಿಯೇ ಬೀಡು ಬಿಟ್ಟಿದ್ದಾರೆ. ಈ ವೇಳೆ ಶೋಭಾ ಅವರು ಮಾವುತರು ಹಾಗೂ ಕಾವಾಡಿಗಳಿಗೆ ಲಘು ಉಪಹಾರ ಬಡಿಸಿದ್ದಾರೆ.
ಶೋಭಾ ಕರಂದ್ಲಾಜೆ ಅವರು ಪ್ರತಿ ವರ್ಷ ಉಪಹಾರದ ವ್ಯವಸ್ಥೆ ಮಾಡುತ್ತಾರೆ. ಇಂದು ಮಾವುತರು, ಕಾವಾಡಿಗಳ ಕುಟುಂಬಕ್ಕೆ ಮಸಾಲೆ ದೋಸೆ, ಪೊಂಗಲ್, ಇಡ್ಲಿ, ವಡೆ, ಹಾಲುಬಾಯಿ, ಖಾರಾಬಾತ್ ರೆಡಿ ಮಾಡಿದ್ದಾರೆ. 40 ಕುಟುಂಬಗಳಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದ್ದು, 300 ಮಂದಿ ಉಪಹಾರ ಸ್ವೀಕರಿಸಲಿದ್ದಾರೆ. ಇದೇ ವೇಳೆ ಶೋಭಾ ಅವರು ಮಹಿಳೆಯರಿಗೆ ಸೀರೆ ವಿತರಿಸಿದ್ದು, ಅವರಿಗೆ ಉಸ್ತುವಾರಿ ಸಚಿವ ಸೋಮಣ್ಣ ಸಾಥ್ ನೀಡಿದ್ದಾರೆ.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶೋಭಾ ಅವರು, ಪ್ರತಿ ವರ್ಷದಂತೆ ಈ ವರ್ಷವೂ ನಾನು ನನ್ನ ಸಂಪ್ರದಾಯ ಮುಂದುವರಿಸಿಕೊಂಡು ಬಂದಿದ್ದೇನೆ. ಈ ಬಾರಿ ಅತ್ಯುತ್ತಮವಾಗಿ ದಸರಾ ನಡೆಸಲಾಗುತ್ತದೆ. ಯಡಿಯೂರಪ್ಪ ಅವರು ಸಿಎಂ ಆದಾಗ ಮಾವುತರನ್ನು ಸರ್ಕಾರಿ ನೌಕರರಾಗಿ ನೇಮಕ ಮಾಡಿದ್ದೇವು. ಈಗ ಮಾವುತರು ಪ್ರಮೋಶನ್ ಕೊಡಬೇಕು ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಯಡಿಯೂರಪ್ಪ ಅವರ ಬಳಿ ಮಾತಾಡಿ ಪ್ರಮೋಶನ್ ಮತ್ತೆ ಅವರಿಗೆ ಬೇಕಾಗಿರುವ ಅಗತ್ಯ ಸೌಲಭ್ಯ ಮಾಡಿಕೊಡುವ ಕೆಲಸ ಮಾಡುತ್ತೀವಿ. ಇಂದು ಮಾವುತರು ಖುಷಿಯಾಗಿದ್ದು, ಇದನ್ನು ನಾವು ಮುಂದುವರಿಸುತ್ತೇವೆ ಎಂದು ಹೇಳಿದರು.
ಇದೇ ವೇಳೆ ನೆರೆ ಪರಿಹಾರಕ್ಕೆ ಕಡಿಮೆ ಹಣ ನೀಡಿದ್ದಾರೆ ಎಂಬ ಟೀಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ಟೀಕೆಗಳಿಗೆ ಉತ್ತರ ಕೊಡುವುದಿಲ್ಲ. ಯಾರು ಬೇಕಾದರೂ ಟೀಕೆ ಮಾಡಬಹುದು. ಆದರೆ ನಾವು ನಮ್ಮ ಕೆಲಸ ಮಾಡುತ್ತೀವೆ. ಒಂದೆರೆಡು ತಿಂಗಳಿನಲ್ಲಿ ಮನೆ ಕಟ್ಟಲು ಆಗುವುದಿಲ್ಲ. ಹಂತ ಹಂತವಾಗಿ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತೆ. ಈ ಬಗ್ಗೆ ಯಾರು ಆತಂಕ ಪಡುವ ಅಗತ್ಯ ಇಲ್ಲ. ಏಕೆಂದರೆ ನಾವು ಎಲ್ಲರಿಗೂ ಮನೆ ಕಟ್ಟಿಕೊಡುತ್ತೇವೆ. ಸೇತುವೆ ಸೇರಿದಂತೆ ಅಗತ್ಯ ಮೂಲ ಭೂತ ಸೌಕರ್ಯಗಳನ್ನು ನಾವು ನೀಡುತ್ತೇವೆ. ಸರ್ಕಾರ ಜನರ ಪರವಾಗಿ ಇದ್ದೇ ಇರುತ್ತೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜನರ ಜೊತೆ ಸದಾ ಇರುತ್ತೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.