ಭೋಪಾಲ್: ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸುತ್ತಿರುವ ಮಧ್ಯಪ್ರದೇಶದ ಹನಿ ಟ್ರ್ಯಾಪ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಅಚ್ಚರಿಯ ಮಾಹಿತಿ ಬಹಿರಂಗವಾಗುತ್ತಿದೆ. ಇನ್ನೂ ಭಯಾನಕ ವಿಷಯವೆಂದರೆ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಒಟ್ಟು 1,000 ವಿಡಿಯೋಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಎಸ್ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟು ಮೂರು ರಾಜ್ಯಗಳಲ್ಲಿರುವ ಈ ಗ್ಯಾಂಗ್ನ ಸದಸ್ಯರ ಬಳಿ ಈ ಒಂದು ಸಾವಿರಕ್ಕೂ ಅಧಿಕ ವಿಡಿಯೋಗಳಿದ್ದು, ಮಧ್ಯಪ್ರದೇಶ, ಛತ್ತಿಸ್ಗಡ ಹಾಗೂ ಮಹಾರಾಷ್ಟ್ರಗಳಲ್ಲಿನ ಸದಸ್ಯರ ಬಳಿ ಇವೆ ಎಂದು ಎಸ್ಐಟಿ ತನಿಖೆ ವೇಳೆ ಬಹಿರಂಗವಾಗಿದೆ. ಈ ಹನಿ ಟ್ರ್ಯಾಪ್ ಗ್ಯಾಂಗ್ ಸುಲಿಗೆ ಮಾಡಿದ್ದಲ್ಲದೆ, ರಾಜಕಾರಣಿಗಳು ಹಾಗೂ ಅಧಿಕಾರಿಗಳ ಸಹಾಯದಿಂದ ಸರ್ಕಾರದ ಪ್ರಮುಖ ಗುತ್ತಿಗೆಗಳನ್ನು ಪಡೆದುಕೊಂಡಿದೆ ಎಂದು ಪೊಲೀಸರು ಮಾಹಿತಿ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಬಾಲಿವುಡ್ ನಟಿಯರು ಬೇಡ, ಕಾಲೇಜ್ ಹುಡುಗಿಯರು ಬೇಕು – ಬಯಲಾಯ್ತು ರಾಜಕಾರಣಿಗಳ ಮುಖ
ಮಾಜಿ ಮುಖ್ಯಮಂತ್ರಿ, ರಾಜಕಾರಣಿಗಳು, ಅಧಿಕಾರಿಗಳು ಸೇರಿದಂತೆ ಒಟ್ಟು 50ಕ್ಕೂ ಹೆಚ್ಚು ಜನ ಹನಿ ಟ್ರ್ಯಾಪ್ಗೆ ಬಲಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ 6 ಜನರನ್ನು ಎಸ್ಐಟಿ ಬಂಧಿಸಿದೆ.
ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕಾರಣಿಗಳೊಂದಿಗೆ ಸೇರಿ ಹಲವಾರು ಭೋಪಾಲ್ ಮೂಲದ ಪತ್ರಕರ್ತರು ಸಹ ಭಾಗಿಯಾಗಿದ್ದಾರೆ ಎಂಬ ಅಚ್ಚರಿಯ ಮಾಹಿತಿ ಬಹಿರಂಗವಾಗಿದೆ. ಹಿಂದಿ ಪತ್ರಿಕೆಯೊಂದರ ಸ್ಥಾನಿಕ ಸಂಪಾದಕ, ಸುದ್ದಿ ವಾಹಿನಿಯ ಕ್ಯಾಮೆರಾಮೆನ್ ಹಾಗೂ ಸ್ಥಳೀಯ ವಾಹಿನಿಯ ಮಾಲೀಕ ಸಹ ಭಾಗಿಯಾಗಿದ್ದಾರೆ ಎಂದು ಎಸ್ಐಟಿ ಪತ್ತೆ ಹಚ್ಚಿದೆ. ಪತ್ರಕರ್ತರು ಹನಿ ಟ್ರ್ಯಾಪ್ನ ಕಿಂಗ್ ಪಿನ್ ಶ್ವೇತಾ ಜೈನ್, ರಾಜಕಾರಣಿಗಳು ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.
ಪ್ರಕರಣದಲ್ಲಿ ಪತ್ರಕರ್ತರೂ ಬಾಗಿಯಾಗಿರುವ ಕುರಿತು ಆಡಳಿತಾರೂಢ ಕಾಂಗ್ರೆಸ್ನ ವಕ್ತಾರ ಕೆ.ಕೆ.ಮಿಶ್ರಾ ಪ್ರತಿಕ್ರಿಯಿಸಿದ್ದು, ಎಸ್ಐಟಿ ಸಾಕ್ಷ್ಯಗಳನ್ನು ಸಂಗ್ರಹಿಸಿದ ಕೂಡಲೇ ಹಗರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಎಸ್ಐಟಿ ಇಲ್ಲಿಯವರೆಗೆ ಯಾವುದೇ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ ಪ್ರಕರಣದ ಕಿಂಗ್ ಪಿನ್ಗಳಾದ ಶ್ವೇತಾ ಜೈನ್ ಹಾಗೂ ಅವಳ ಸಹವರ್ತಿ ಆರತಿ ದಯಾಳ್ ರಾಜಕಾರಣಿಗಳು ಹಾಗೂ ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ಕೆಲವು ಪತ್ರಕರ್ತರನ್ನು ಬಳಸಿಕೊಂಡಿರುವ ಕುರಿತು ಎಸ್ಐಟಿ ಮಾಹಿತಿ ನೀಡಿದೆ ಎಂದು ಹೇಮಂತ್ ಶರ್ಮಾ ತಿಳಿಸಿದ್ದಾರೆ.
ಎಸ್ಐಟಿ ಮೂಲಗಳು ಈ ಕುರಿತು ಮಾಹಿತಿ ನೀಡಿದ್ದು, ಪ್ರಸ್ತುತ ತನಿಖೆಯನ್ನು ಸರ್ಕಾರದಲ್ಲಿ ಪ್ರಮುಖ ಹುದ್ದೆಗಳನ್ನು ಹೊಂದಿದ್ದ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಪಾತ್ರ ಕಂಡುಹಿಡಿಯುವಲ್ಲಿ ಕೇಂದ್ರೀಕರಿಸಲಾಗಿದೆ. ಈಗಾಗಲೇ ದಂಧೆಯ ಮಾಸ್ಟರ್ ಮೈಂಡ್ ಶ್ವೇತಾ ಜೈನ್, ಅವಳ ಪತಿ ಸ್ವಪ್ನಿಲ್ ಜೈನ್ ಹಾಗೂ ಶ್ವೇತಾ ಸಹವರ್ತಿ ಆರತಿ ದಯಾಳ್ ಇವರನ್ನು ಬಂಧಿಸಲಾಗಿದೆ. ಇವರನ್ನು ವಿಚಾರಣೆ ನಡೆಸಿದಾಗ ಪ್ರಮುಖ ರಾಜಕಾರಣಿಗಳು, ಅಧಿಕಾರಿಗಳು ಹನಿ ಟ್ರ್ಯಾಪ್ಗೆ ಬಲಿಪಶು ಆಗಿದ್ದಾರೆ. ಅಲ್ಲದೆ, ಅವರ ಎನ್ಜಿಓ ಮೂಲಕ ಹಣ ಹಾಗೂ ಸರ್ಕಾರದ ಗುತ್ತಿಗೆ ಪಡೆದಿರುವ ಮಾಹಿತಿ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.
ಈ ಕುರಿತು ಎಸ್ಐಟಿ ಮುಖ್ಯಸ್ಥ ಸಂಜೀವ್ ಶಮಿ ಮಾಹಿತಿ ನೀಡಿ, ಶ್ವೇತಾ ಜೈನ್ ಹನಿ ಟ್ರ್ಯಾಪ್ಗೆ ರಾಜಕಾರಣಿಗಳು ಹಾಗೂ ಅಧಿಕಾರಿಗಳನ್ನು ಪಲಿಪಶುಗಳನ್ನಾಗಿ ಮಾಡುವ ಮೂಲಕ ಕೋಟ್ಯಂತರ ರೂ. ಸರ್ಕಾರಿ ಗುತ್ತಿಗೆಗಳನ್ನು ತಮ್ಮ ಎನ್ಜಿಓ ಮೂಲಕ ಬೇರೆ ಕಂಪನಿಗಳಿಗೆ ಕೊಡಿಸಿದ್ದಾಳೆ ಎಂದು ತಿಳಿದುಬಂದಿದೆ. ಇಂತಹ ಒಪ್ಪಂದಗಳ ದಾಖಲೆ ದಾಖಲೆ ಪತ್ತೆಹಚ್ಚಿದಲ್ಲಿ ಖಂಡಿತವಾಗಿಯೂ ಅಂತಹ ಸರ್ಕಾರಿ ನೌಕರರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಅಲ್ಲದೆ, ಭೋಪಾಲ್ನಲ್ಲಿ ಕಳೆದ 7-8 ವರ್ಷಗಳೂ ಹಿಂದಿನಿಂದಲೂ ಲೈಂಗಿಕ ಅಪರಾಧಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
ನೂರಾರು ಕೋಟಿ ರೂ.ಗಳ ಸರ್ಕಾರಿ ಗುತ್ತಿಗೆಗಳನ್ನು ಪಡೆಯುವುದೇ ಈ ಗ್ಯಾಂಗ್ನ ಪ್ರಮುಖ ಉದ್ದೇಶವಾಗಿತ್ತು. ತಮ್ಮ ಎನ್ಜಿಓಗಳಿಂದ ಇದನ್ನು ನಿರ್ವಹಿಸುತ್ತಿದ್ದರು. ಇದಕ್ಕಾಗಿ ಪ್ರಮುಖ ರಾಜಕಾರಣಿಗಳು ಹಾಗೂ ಅಧಿಕಾರಿಗಳನ್ನು ಬಳಸಿಕೊಂಡಿದ್ದಾರೆ. ಈ ಕುರಿತು ಸಾಕ್ಷ್ಯಾಧಾರಗಳು ಸಿಕ್ಕಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಅಧಿಕಾರಿಗಳು ಹಾಗೂ ರಾಜಕಾರಣಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.