ಹಾಸನ: ಪಾಪಿ ಮಗನೊಬ್ಬ ತನ್ನ ಹೆತ್ತತಾಯಿಯ ಕೈಯನ್ನು ಕತ್ತರಿಸಿ ಭೀಕರವಾಗಿ ಹಲ್ಲೆ ಮಾಡಿರುವ ಅಮಾನುಷ ಘಟನೆ ಹಾಸನದಲ್ಲಿ ನಡೆದಿದೆ.
ಸಕಲೇಶಪುರದ ತಾಲೂಕಿನ ಯಡವರಹಳ್ಳಿಯಲ್ಲಿ ಈ ಘಟನೆ ನಡೆದಿದೆ. 55 ವರ್ಷದ ಲಲಿತಮ್ಮ ತನ್ನ ಹೆತ್ತ ಮಗನಿಂದಲೇ ಹಲ್ಲೆಗೊಳಗಾದ ನತದೃಷ್ಟ ತಾಯಿ. ಆರೋಪಿ ದಿಲೀಪ್ ಈ ಕೃತ್ಯ ಎಸಗಿರುವ ಪಾಪಿ ಪುತ್ರ.
ಪಾಪಿ ದಿಲೀಪ್ ಮದುವೆ ಆಗಿ ಮೊದಲನೆ ಪತ್ನಿಯನ್ನು ಬಿಟ್ಟಿದ್ದು ಎರಡನೇ ಮದುವೆ ಆಗಿರುವ ವಿಚಾರವಾಗಿ ತಾಯಿಮಗನಲ್ಲಿ ವೈಮನಸ್ಸು ಇತ್ತು. ಮತ್ತು ಆಸ್ತಿ ವಿಚಾರವಾಗಿ ಪದೇ ಪದೇ ದಿಲೀಪ್ ತನ್ನ ತಾಯಿಯ ಬಳಿ ಜಗಳವಾಡುತಿದ್ದನು. ಒಂದು ದಿನ ಮುಂಚಿತವಾಗಿ ಕತ್ತಿ ಹಿಡಿದುಕೊಂಡು ಓಡಾಡುತ್ತಿದ್ದ ದುರುಳ ಶುಕ್ರವಾರ ರಾತ್ರಿ ತನ್ನ ತಾಯಿಯ ಮೇಲೆ ಏಕಾಏಕಿ ಎಗರಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ.
ತನ್ನ ಹೆತ್ತಮ್ಮನ ಮೇಲೆ ಮಚ್ಚು ಬೀಸಿದ್ದಾನೆ. ಒಂದು ಕೈ ಸ್ಥಳದಲ್ಲಿಯೇ ಕತ್ತರಿಸಿ ಹೋಗಿದ್ದು ಮತ್ತೊಂದು ಕೈನ ಎರಡು ಬೆರಳುಗಳು ತುಂಡಾಗಿದೆ. ಕೃತ್ಯ ಎಸಗಿದ ಪಾಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಸ್ಥಳೀಯರ ಸಮಯ ಪ್ರಜ್ಞೆಯಿಂದಾಗಿ ಸಮೀಪದ ಶುಕ್ರವಾರಸಂತೆ ಗ್ರಾಮದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಬಲವಾದ ಪೆಟ್ಟು ಬಿದ್ದಿರುವ ಲಲಿತಮ್ಮ ಈಗ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಪಾಪಿ ಪುತ್ರನಿಗೆ ಕಠಿಣವಾದ ಶಿಕ್ಷೆಯಾಗಬೇಕು ಎಂದು ಸ್ಥಳೀಯರು ಸಂಬಂಧಿಕರು ಆಗ್ರಹಿಸಿದ್ದಾರೆ.
ಸದ್ಯ ಆರೋಪಿ ವಿರುದ್ಧ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv