ನವದೆಹಲಿ: ಗುಜರಾತ್ನ (Gujarat) ಮೊರ್ಬಿ (Morbi) ತೂಗು ಸೇತುವೆ (Bridge) ಕುಸಿತ ಪ್ರಕರಣವನ್ನು ನ್ಯಾಯಾಲಯದ ಮೇಲ್ವಿಚಾರಣೆಯ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ (Supreme Court) ಒಪ್ಪಿಕೊಂಡಿದೆ. ನವೆಂಬರ್ 14 ರಂದು ಕೋರ್ಟ್ ವಿಚಾರಣೆ ನಡೆಸಲಿದೆ.
ವಕೀಲ ವಿಶಾಲ್ ತಿವಾರಿ ಈ ಪಿಐಎಲ್ ಸಲ್ಲಿಸಿದ್ದರು. ಅರ್ಜಿಯಲ್ಲಿ, ಸೇತುವೆ ಕುಸಿದು 130 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ 40ಕ್ಕೂ ಹೆಚ್ಚು ಮಕ್ಕಳು ಸೇರಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ ಎಸ್ಐಟಿ ರಚನೆ ಮಾಡಿದೆ. ಆದರೆ ಚುನಾವಣಾ ರಾಜ್ಯವಾಗಿರುವ ಹಿನ್ನೆಲೆ ಸ್ವತಂತ್ರ ತನಿಖೆಗೆ ಹಲವು ನಾಯಕರು ಮನವಿ ಮಾಡಿದ್ದಾರೆ.
ಈ ಹಿನ್ನೆಲೆ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು. ಈ ದುರ್ಘಟನೆ ಬಗ್ಗೆ ನಿಖರವಾದ ಕಾರಣ ಪತ್ತೆಹಚ್ಚಬೇಕು. ಜೊತೆಗೆ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ನೀಡಬೇಕು ಎಂದು ಮನವಿ ಮಾಡಲಾಗಿದೆ. ಇದನ್ನೂ ಓದಿ: ಗುಜರಾತ್ನ ಮೋರ್ಬಿ ದುರಂತ- ಉತ್ತರವಿಲ್ಲದ ಐದು ಪ್ರಶ್ನೆಗಳು
ಇದರೊಂದಿಗೆ ದೇಶದಲ್ಲಿರುವ ಹಳೆಯ ಮತ್ತು ಅಪಾಯಕಾರಿ ಸ್ಮಾರಕಗಳು, ಸೇತುವೆಗಳ ಸಮೀಕ್ಷೆ ಮಾಡಿ, ಅದರ ಅಪಾಯದ ಮೌಲ್ಯಮಾಪನ ಮಾಡಬೇಕು. ಇದಕ್ಕಾಗಿ ಸಮಿತಿಯನ್ನು ರಚಿಸಬೇಕು. ಈ ನಿಟ್ಟಿನಲ್ಲಿ ಕೋರ್ಟ್ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ನ್ಯಾಯಲಯಕ್ಕೆ ಕೋರಲಾಗಿದೆ. ಇದನ್ನೂ ಓದಿ: ಮೋರ್ಬಿ ದುರಂತ ರಾಜಕೀಯಗೊಳಿಸೋದು ಅಗೌರವ – ಮೃದು ಸ್ವಭಾವ ತೋರಿದ ರಾಹುಲ್