– ಸರ್ವಪಕ್ಷ ಸಭೆಯ ಬಳಿಕ ಸಿಎಂ ಮಾತು
– ನಿನ್ನೆ ಮಧ್ಯಾಹ್ನದವರೆಗೆ ತಮಿಳುನಾಡಿಗೆ ನೀರು ಹರಿಸಿಲ್ಲ
ಬೆಂಗಳೂರು: ಕಬಿನಿ ಜಲಾಶಯ (Kabini Dam) ಸಂಪೂರ್ಣ ಭರ್ತಿಯಾಗಿದೆ. ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ಎರಡರಿಂದ ಮೂರು ಅಡಿ ಕಾಯ್ದುಕೊಂಡು ನಿನ್ನೆ ಮಧ್ಯಾಹ್ನದ ನಂತರ ನೀರನ್ನು ಹೊರಗೆ ಬಿಡಲಾಗಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumr) ಹೇಳಿದ್ದಾರೆ.
ಸರ್ವಪಕ್ಷ ಸಭೆಯ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದುವರೆಗೆ ಯಾವುದೇ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಟ್ಟಿರಲಿಲ್ಲ. ಆದರೆ ಕಬಿನಿ ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ನೀರು ಹರಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ (Karnataka) ಆರಂಭದಲ್ಲಿ ಮಳೆ ಕೊರತೆಯಾಗಿ 35% ಮಾತ್ರ ಮಳೆಯಾಗಿತ್ತು. ಆದರೆ ಈಗ ದೇವರ ದಯೆಯಿಂದ ಮಳೆಯಾಗಿ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ಕಬಿನಿಗೆ ಈಗ 24,000 ಕ್ಯೂಸೆಕ್, ಕೆಆರ್ಎಸ್ಗೆ 22,000 ಸಾವಿರ ಕ್ಯೂಸೆಕ್, ಹೇಮಾವತಿ 12,000 ಕ್ಯೂಸೆಕ್, ಹಾರಂಗಿ 10,000 ಕ್ಯೂಸೆಕ್ ಸೇರಿದಂತೆ ಒಟ್ಟು 67,378 ಕ್ಯೂಸೆಕ್ ಒಳಹರಿವು ಇದೆ ಎಂದು ಮಾಹಿತಿ ನೀಡಿದರು.
ಕಾವೇರಿ ಕಣಿವೆಯ ರೈತನ ಮಗನಾಗಿ ನಾಡಿನ ಏಳೂವರೆ ಕೋಟಿ ಜನರ ಹಿತರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ರಾಜ್ಯದ ಕುಡಿಯುವ ನೀರಿನ ಅಭಾವ ತಪ್ಪಿಸಲು ಕನಿಷ್ಠ 40 ಟಿಎಂಸಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಮಾಹಿತಿ ನೀಡಿದರು.
ತಮಿಳುನಾಡು ಸರ್ಕಾರ 9 ಟಿಎಂಸಿ ನೀರಿಗಾಗಿ ಪಟ್ಟು ಹಿಡಿದಿತ್ತು, ಆದರೆ ಕಾವೇರಿ ನೀರು ನಿಯಂತ್ರಣ ಸಮಿತಿ (CWC) ಪ್ರತಿ ದಿನ 3,500 ಕ್ಯೂಸೆಕ್ ನೀರು ಬಿಡಲು ಆದೇಶಿಸಿತ್ತು. ದೆಹಲಿಯ ವಕೀಲರ ತಂಡದೊಂದಿಗೆ ವರ್ಚುವಲ್ ಸಭೆ ನಡೆಸಿ, ಸಂಕಟದ ಸೂತ್ರದಂತೆ (Distress Formula) ಕಾನೂನು ತಜ್ಞರ ಸಲಹೆ ಪಡೆಯಲಾಗಿದೆ. ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರು ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಸಲಹೆಯಂತೆ ಅವರ ಪಕ್ಷದ ನಾಯಕರು ಪಾಲ್ಗೊಂಡಿದ್ದು, ಎಲ್ಲ ವಿರೋಧ ಪಕ್ಷಗಳು ಸರ್ಕಾರದ ತೀರ್ಮಾನಕ್ಕೆ ಬೆಂಬಲ ಸೂಚಿಸಿವೆ ಎಂದು ತಿಳಿಸಿದರು.
ಬಂದ್ ಬೇಡ
ಕರ್ನಾಟಕ ಬಂದ್ ಮಾಡುವುದರಿಂದ ಯಾರಿಗೂ ಪ್ರಯೋಜನವಿಲ್ಲ. ಈ ಕುರಿತು ಸರ್ವಪಕ್ಷ ಸಭೆಯಲ್ಲೂ ಒಮ್ಮತದ ತೀರ್ಮಾನವಾಗಿದೆ. ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು ದ್ಗೆ ಅವಕಾಶ ನೀಡಬಾರದು ಎಂದು ಮನವಿ ಮಾಡುತ್ತೇನೆ. ಸರ್ಕಾರವೇ ಈ ಕುರಿತು ಸಂಘಟನೆಗಳೊಂದಿಗೆ ಮತ್ತು ಸಚಿವರೊಂದಿಗೆ ಮಾತುಕತೆ ನಡೆಸಲಿದೆ. ರೈತರಿಗೆ ಸರ್ಕಾರ ಸೂಕ್ತ ಮಾರ್ಗದರ್ಶನ ನೀಡುವವರೆಗೆ ತಾಳ್ಮೆಯಿಂದ ಇರಬೇಕು ಎಂದು ಅವರು ವಿನಂತಿಸಿದರು.
