ಮಂಗಳೂರು: ಬಕ್ರೀದ್ ಆಚರಿಸಲು ಬಂದ ಅನ್ಯಧರ್ಮೀಯ ಯುವಕ, ಯುವತಿಯರನ್ನು ತಡೆದು ಹಲ್ಲೆಗೈಯುವ ಮೂಲಕ ನೈತಿಕ ಪೊಲೀಸ್ಗಿರಿ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸಂಟ್ಯಾರ್ ಸಮೀಪದ ರೆಂಜದಲ್ಲಿ ನಡೆದಿದೆ.
ಮಂಗಳವಾರ ಬಕ್ರೀದ್ ಆಚರಣೆ ಇದ್ದ ಕಾರಣ 5 ಯುವತಿಯರು ಮತ್ತು 5 ಯುವಕರು ಆಗಮಿಸಿದ್ದರು. ಈ ವೇಳೆ ಗುಂಪೊಂದು ತಡೆದು ಯುವತಿಯರನ್ನು ನಿಂದಿಸಿದ್ದಾರೆ. ಇದನ್ನು ತಡೆಯಲು ಬಂದ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಂಪ್ಯ ಪೊಲೀಸರು ಏಳು ಮಂದಿ ಆರೋಪಿಗಳ ಬಂಧಿಸಿದ್ದಾರೆ. ರುಕ್ಮ, ಗಣೇಶ್, ಕುಂಞ, ದುಗ್ಗಪ್ಪ, ಪುರುಷೋತ್ತಮ್, ಸತೀಶ್, ಶೇಷಪ್ಪ ಬಂಧಿತ ಆರೋಪಿಗಳಾಗಿದ್ದಾರೆ.
ನಡೆದಿದ್ದು ಏನು?
ಹಲ್ಲೆಗೊಳಾಗದ ಯುವಕ, ಯುವತಿಯರು ಮಂಗಳೂರಿನ ಮೂಲದವರಾಗಿದ್ದು, ಸ್ನೇಹಿತನ ಆಹ್ವಾನ ಮೇಲೆ ಪುತ್ತೂರು ಬಳಿಯ ನಿದ್ಬಪಳ್ಳಿ ಗ್ರಾಮದ ಅಬ್ದುಲ್ ಎಂಬವರ ಮನೆಗೆ ಬಕ್ರೀದ್ ಆಚರಿಸಲು ಮಂಗಳವಾರ ಮಧ್ಯಾಹ್ನದ ವೇಳೆ ಬಂದಿದ್ದರು. ಮನೆಗೆ ತೆರಳಲು ಆಟೋದಲ್ಲಿ ಹೋಗುವ ವೇಳೆ ಇದನ್ನು ಆಕ್ಷೇಪಿಸಿದ ಸ್ಥಳೀಯ ಆಟೋ ಚಾಲಕ ಯುವತಿಯರನ್ನು ನಿಂದನೆ ಮಾಡಿದ್ದಾನೆ. ಈ ವೇಳೆ ಅಡ್ಡ ಬಂದ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ.
ಬಳಿಕ ಹಲ್ಲೆಗೊಳಗಾದ ಯುವಕ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿ ತೆರಳಿದ್ದು, ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ಯುವತಿಯರು ನೀಡಿದ ದೂರಿನ ಮೇಲೆ ಪೊಲೀಸರು ಕ್ರಮಗೈಗೊಂಡಿದ್ದಾರೆ. ಘಟನೆ ಕುರಿತು ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv