ಬೀದರ್: ಜಿಲ್ಲೆಯ (Bidar) ಹಲವೆಡೆ ಒಂದು ಗಂಟೆಯಿಂದ ಸುರಿದ ಧಾರಾಕಾರ ಮಳೆಗೆ (Rain) ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬೀದರ್, ಹುಮ್ನಾಬಾದ್, ಚಿಟ್ಟಗುಪ್ಪ, ಬಸವಕಲ್ಯಾಣ, ಔರಾದ್ ಸೇರಿದಂತೆ ಜಿಲ್ಲೆಯಾದ್ಯಂತ ಬಿರುಗಾಳಿ, ಸಿಡಿಲು ಸಹಿತ ಮಳೆಯಾಗಿದೆ.

ರಾಯಚೂರು: ಮಳೆಯಿಲ್ಲದೆ ಕಂಗೆಟ್ಟಿದ್ದ ಬಿಸಿಲನಾಡು ರಾಯಚೂರು (Raichur) ಜಿಲ್ಲೆಯಲ್ಲಿ ಕೊನೆಗೂ ಮಳೆರಾಯ ದರ್ಶನ ನೀಡಿದ್ದಾನೆ. ರಾಯಚೂರು ಜಿಲ್ಲೆಯಾದ್ಯಂತ ಗುಡುಗು ಮಿಂಚು ಸಹಿತ ಜೋರು ಮಳೆಯಾಗಿದೆ. ಸುಮಾರು ಒಂದು ಗಂಟೆ ಕಾಲ ಮಳೆ ಸುರಿದಿದೆ.
ಮುಂಗಾರು ಆರಂಭವಾದಾಗಿನಿಂದ ಮಳೆ ಬಾರದೇ ರೈತರು ಕಂಗಾಲಾಗಿದ್ದರು. ಹತ್ತಿ, ಮೆಣಸಿನಕಾಯಿ, ತೊಗರಿ ಬೆಳೆದು ನಷ್ಟದ ಆತಂಕದಲ್ಲಿದ್ದ ರೈತರು ಮಳೆಗಾಗಿ ಸಪ್ತ ಭಜನೆ, ಕಪ್ಪೆ ಪೂಜೆ, ಪಾದಯಾತ್ರೆ, ದೇವರಿಗೆ ಜಲಾಭೀಷೇಕ ಸೇರಿ ನಾನಾ ಪೂಜೆಗಳ ಮೂಲಕ ದೇವರ ಮೊರೆ ಹೋಗಿದ್ದರು. ಕೊನೆಗೂ ಮಳೆರಾಯನ ದರ್ಶನದಿಂದ ರೈತರು ನಿಟ್ಟುಸಿರುವ ಬಿಟ್ಟಿದ್ದಾರೆ.

ರಾಯಚೂರು ನಗರ ಸೇರಿ ಜಿಲ್ಲೆಯ ಹಲವೆಡೆ ಜೋರು ಮಳೆ ಸುರಿಯುತ್ತಿದೆ. ನಗರದಲ್ಲಿ ಜೋರು ಮಳೆಗೆ ರಸ್ತೆ ಮೇಲೆಲ್ಲಾ ನೀರು ಹರಿದು ವಾಹನಗಳ ಸಂಚಾರ ಅಸ್ತವ್ಯಸ್ತವಾಗಿತ್ತು.
ಶಿವಮೊಗ್ಗ: ವಾರದ ಬಳಿಕ ಜಿಲ್ಲೆಯಲ್ಲಿ (Shivamogga) ಮಳೆ ಆರಂಭವಾಗಿದೆ. ಸಾಗರ, ಹೊಸನಗರ, ಕುಗ್ವೆ, ತಾಳಗುಪ್ಪ, ಕಾಸ್ಪಾಡಿ, ವರದಹಳ್ಳಿ ಭಾಗದಲ್ಲಿ ಮಳೆಯಾಗುತ್ತಿದೆ. ಬೆಳೆ ಒಣಗುವ ಆತಂಕದಲ್ಲಿದ್ದ ರೈತರಿಗೆ ಮಳೆ ನೆಮ್ಮದಿ ತಂದಿದೆ.

ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಹಲವು ದಿನಗಳಿಂದ ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಮಳೆ ತಂಪು ತಂದಿದೆ. ಮಳೆಯ ಕೊರತೆಯಿಂದ ಆತಂಕದಲ್ಲಿದ್ದ ರೈತರು ಕೂಡ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಸುಂಟಿಕೊಪ್ಪ, ಮದೆನಾಡು, ಗಾಳಿಬೀಡು ಸೇರಿದಂತೆ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
