ದಾವಣಗೆರೆ: ಮಠಗಳು ರಾಜಕೀಯ ಮಾಡಬಾರದು, ರಾಜಕೀಯ ಮಾಡಿಸಬೇಕು ಎಂದು ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೋಡಿ ಕನಕ ಗುರು ಪೀಠದಲ್ಲಿಂದು `ಮಠಗಳು ರಾಜಕೀಯ ಕೇಂದ್ರಗಳಾಗಿ ಪರಿಣಮಿಸಿವೆ’ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: FASTag ನಿಂದ ಹಣ ಕದಿಯುತ್ತಾರೆ – ಫೇಕ್ ವೀಡಿಯೋ ಶೇರ್ ಮಾಡಬೇಡಿ
ಮಠಗಳು ರಾಜಕೀಯ ಮಾಡಬಾರದು, ಮಾಡಿಸಬೇಕು. ಮಠಗಳಿಗೆ ಪಕ್ಷದ ವರಿಷ್ಠರು ಭೇಟಿ ನೀಡುವುದು ಅವರ ವೈಯಕ್ತಿಕ. ನಾವು ಮಠಕ್ಕೆ ಬರುವುದು ಬೇಡ ಎನ್ನಲಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಪಠ್ಯಪುಸ್ತಕ ಗೊಂದಲ ಸರಿಪಡಿಸಿ: ರಾಜ್ಯದಲ್ಲಿ ಪಠ್ಯಪುಸ್ತಕ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿದೆ. ನಿಮ್ಮ ಉದ್ಧಟತನಗಳು ಕಾರ್ಯವೈಖರಿಗಳು ಹೀಗೇ ಮುಂದುವರಿದರೆ ಬಹಳ ಕಷ್ಟ ಅನುಭವಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಇಂದು ರಾತ್ರಿ 9:30 ರಿಂದ ಬೆಳಗ್ಗೆ 7 ಗಂಟೆ ವರೆಗೂ ನೇರಳೆ ಮಾರ್ಗದ ಮೆಟ್ರೋ ಸೇವೆ ಸ್ಥಗಿತ
ಶಿಕ್ಷಣ ಯಾವುದೇ ಜಾತಿಗೆ ಸೀಮಿತವಾಗಬಾರದು. ಕುವೆಂಪು, ಬಸವಣ್ಣ, ಕನಕದಾಸರು ಸೇರಿದಂತೆ ಹಲವು ಮಹನೀಯರ ಜೀವನದ ಸತ್ಯಾಂಶಗಳ ಚರಿತ್ರೆಯನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು. ಪಠ್ಯದಲ್ಲಿ ಕೆಲ ಅಂಶಗಳನ್ನು ಮುಚ್ಚಿಟ್ಟು, ಇಲ್ಲಸಲ್ಲದ ಅಂಶಗಳನ್ನು ಸೇರಿಸಿ ಜನರಿಗೆ ತೋರಿಸುವುದು ಅಕ್ಷಮ್ಯ ಅಪರಾಧ. ಸರಿಪಡಿಸದೇ ಇದ್ದರೆ ಬೃಹತ್ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿ ವಿಚಾರವಾಗಿ ಮಾತನಾಡಿದ ಶ್ರೀಗಳು, ಎಲ್ಲ ಸಂಶೋಧನೆ ನಡೆದು ಸರ್ಕಾರಕ್ಕೆ ಇನ್ನು ಕೆಲವೇ ದಿನಗಳಲ್ಲಿ ವರದಿ ಬರಲಿದೆ. ನಮ್ಮ ಹೋರಾಟ ಶುರುವಾದಾಗಿನಿಂದ ಒಂದು ದಿನವೂ ನಾವು ನೆಮ್ಮದಿಯಿಂದ ಇಲ್ಲ. ಪ್ರತಿದಿನ ಕೆಲಸ ಮಾಡುತ್ತಿದ್ದೇವೆ. ಬುಡಕಟ್ಟು ಸಂಶೋಧನಾ ಕೇಂದ್ರದಿಂದ ಸಮಗ್ರವಾದ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಒಂದು ತಿಂಗಳಲ್ಲಿ ಸಂಶೋಧನಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.