ಬೆಂಗಳೂರು: ಉಪೇಂದ್ರ ಅವರು ಪಕ್ಷ ಸ್ಥಾಪನೆಯ ದಿನವೇ ಪ್ರಧಾನಿ ಮೋದಿಯವರನ್ನ ಅವಹೇಳನ ಮಾಡಿದ್ದು, ಮುಂದಿನ ದಿನಗಳಲ್ಲಿ ಅವರ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ನಡೆಸುವುದಾಗಿ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಚಿತ್ರರಂಗದಲ್ಲಿ ಉಪೇಂದ್ರ ಅವರು ನಟರಾಗಿ ಯಶಸ್ವಿಯಾಗಿದ್ದಾರೆ. ಆದರೆ ರಾಜಕೀಯವಾಗಿ ಮೊದಲ ದಿನವೇ ಎಡವಿದ್ದಾರೆ. ಉಪೇಂದ್ರ ಅವರ `ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ’ ಉದಯದ ಬೆನ್ನಲ್ಲೇ ಉಪೇಂದ್ರ ಚಿತ್ರದ ಹಾಡು ಬಳಸಿ ಮೋದಿ ಬಗ್ಗೆ ಸಿದ್ದಪಡಿಸಿದ ವಿಡಿಯೋ ವೈರಲ್ ಆಗಿದೆ ಇದನ್ನು ಬಿಜೆಪಿ ಒಪ್ಪಲ್ಲ, ಇದು ಸರಿಯಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪಕ್ಷ ಕಟ್ಟಲು ರಾಜಕಾರಣ ಮಾಡಲು ಅವಕಾಶ ಇದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳನ ಮಾಡಿರುವುದು ಸರಿಯಲ್ಲ. ಈ ಬಗ್ಗೆ ಕಾನೂನಾತ್ಮಕ ಹೋರಾಟಕ್ಕೂ ಸಿದ್ದವಾಗಬೇಕಾಗುತ್ತೆ. ಹೊಸ ಪಕ್ಷ ಕಟ್ಟಿದ ಮೊದಲ ದಿನವೇ ಉಪೇಂದ್ರ ಎಡವಿರುವುದು ವಿಪರ್ಯಾಸಕ್ಕೆ ಎಡೆಮಾಡಿಕೊಟ್ಟಿದೆ ಎಂದು ಹೇಳಿದರು.
ಇನ್ನೂ ಟಿಪ್ಪು ಜಯಂತಿ ಹಿನ್ನೆಲೆ ಕೊಡಗು ಜಿಲ್ಲೆಗೆ ಬಿಜೆಪಿ ರ್ಯಾಲಿ ನಿಷೇಧ ಮಾಡಿದ್ದಾರೆ. ಜಿಲ್ಲೆಯಲ್ಲಿ ಉಳಿದು ಕೊಳ್ಳಲು ನಮಗೆ ಸರ್ಕಾರ ಅವಕಾಶ ನೀಡುತ್ತಿಲ್ಲ. ಸರ್ಕಾರದ ಕುತ್ರಂತದಿಂದಾಗಿ ಜಿಲ್ಲೆಯ ರ್ಯಾಲಿ ಪ್ರವೇಶ ನಿಷೇಧವಾಗಿದೆ. ನಾವು ಜಿಲ್ಲೆಯಲ್ಲಿ ಶಾಂತಿಯುತವಾಗಿ ರ್ಯಾಲಿ ನಡೆಸುತ್ತೇವೆ. ಜಿಲ್ಲೆಯ ಪ್ರವೇಶಕ್ಕೆ ಅನುಮತಿ ನೀಡಿ. ಶಾಂತಿಯುತವಾಗಿ ರ್ಯಾಲಿ ನಡೆಸಲು ಅವಕಾಶ ನೀಡಬೇಕು ಎಂದು ಪೊಲೀಸ್ ಇಲಾಖೆ ಮತ್ತು ಸರ್ಕಾರಕ್ಕೆ ಶೋಭಾ ಕರಂದ್ಲಾಜೆ ಮನವಿ ಮಾಡಿಕೊಂಡರು.
ಇದನ್ನೂ ಓದಿ: ಉಪ್ಪಿ ರಾಜಕೀಯ ಪಕ್ಷದ ಹೆಸ್ರು ಇಂದು ಅಧಿಕೃತ ಘೋಷಣೆ- ಪಕ್ಷದ ಸ್ವರೂಪ, ಪ್ರಣಾಳಿಕೆಗೂ ಮುಹೂರ್ತ ಫಿಕ್ಸ್
ಕೊಡಗು ಜಿಲ್ಲೆಗೆ ಹೋಗಲು ಬಿಜೆಪಿ ಪರಿವರ್ತನಾ ಯಾತ್ರೆಗೆ ಅನುಮತಿ ನೀಡಿಲ್ಲ. ಯಾತ್ರೆಯಲ್ಲಿ ಬರುವವರಿಗೆ ಹೊಟೇಲ್ ರೂಮ್ ಕೊಡಬಾರದೆಂದು ಸರ್ಕಾರ ಆದೇಶ ಮಾಡಿದೆ. ನಾವು ಶಾಂತಿಯುತ ಪರಿವರ್ತನಾ ಯಾತ್ರೆ ಮಾಡ್ತೇವೆ. ಅನುಮತಿ ನೀಡುವಂತೆ ಕೊಡಗು ಡಿಸಿ ಮತ್ತು ಎಸ್ಪಿ ಅವರಿಗೆ ಮನವಿ ಮಾಡುತ್ತೇವೆ ಎಂದು ಹೇಳಿದರು.
ಇಂಧನ ಇಲಾಖೆ ಅಕ್ರಮ ಕುರಿತು ಸದನ ಸಮಿತಿ ವರದಿಯ ಬಗ್ಗೆ ಪ್ರತಿಕ್ರಿಯಿಸಿ, ಒಪ್ಪಂದ ಆಗಿದ್ರೆ ಅದು ಅವ್ಯವಹಾರ ಆಗುತ್ತಿತ್ತು. ಆದರೆ ನಮ್ಮ ಅವಧಿಯಲ್ಲಿ ಒಪ್ಪಂದ ಮಾಡಿಕೊಂಡಿಲ್ಲ. ಬೆಳಗಾವಿ ಅಧಿವೇಶನದಲ್ಲಿ ವರದಿ ಮಂಡನೆ ಆಗಲಿ. ವರದಿ ಮಂಡನೆ ಆದ್ರೂ ನನಗೇನೂ ಭಯ ಇಲ್ಲ. ನನಗೆ ನನ್ನ ಬಗ್ಗೆ ಸ್ಪಷ್ಟತೆ ಇದೆ. ರಾಜ್ಯದ ಹಿತದೃಷ್ಟಿಯಿಂದ ನಾನು ತೀರ್ಮಾನ ತೆಗೆದುಕೊಂಡಿದ್ದೇನೆಂಬ ವಿಶ್ವಾಸ ಇದೆ. ಬುಟ್ಟಿ ತೆಗಿತೀವಿ ಹಾವು ಬಿಡ್ತೀವಿ ಅಂತ ಕಾಂಗ್ರೆಸ್ ನವರೇ ಹೇಳ್ತಿದ್ದಾರೆ. ಸಿಎಂ ಬಹಳ ಕೇವಲವಾಗಿ ಮಾತಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಬೆಳಗಾವಿ ಅಧಿವೇಶನದಲ್ಲೇ ಪ್ರಕರಣವನ್ನು ಸಿಬಿಐ ಗೆ ವಹಿಸಲಿ ಎಂದು ಶೋಭಾ ಕರಂದ್ಲಾಜೆ ಆಗ್ರಹಿಸಿದರು.