ಬೆಂಗಳೂರು: ರಾಜಕೀಯಕ್ಕೆ ಬರೋದಾಗಿ ಘೋಷಿಸಿ ತೀವ್ರ ಸಂಚಲನ ಮೂಡಿಸಿದ್ದ ರಿಯಲ್ ಸ್ಟಾರ್ ಉಪೇಂದ್ರ ಅವರು ಇವತ್ತು ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ಕೊಡಲು ಸಿದ್ಧರಾಗಿದ್ದಾರೆ. ಜೊತೆಗೆ ಪಕ್ಷದ ಹೆಸರು ಕೂಡ ಇಂದು ಘೋಷಣೆಯಾಗಲಿದೆ.
ಇವತ್ತು ರಾಜಕೀಯ ಪಕ್ಷದ ಹೆಸರು, ಸ್ವರೂಪ, ಪ್ರಣಾಳಿಕೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಶಿವಾನಂದ ಸರ್ಕಲ್ ಬಳಿಯ ಗಾಂಧಿಭವನದಲ್ಲಿ ಪಕ್ಷದ ಹೆಸರು ಘೋಷಣೆಯಾಗಲಿದೆ. ಜೊತೆಗೆ ಮುಂದಿನ ಚುನಾವಣೆಯಲ್ಲಿ ಪಕ್ಷದ ಪಾತ್ರ, ಕಾರ್ಯಕಾರಿ ಸಮಿತಿ ಮತ್ತು ಪಕ್ಷದ ಪ್ರಣಾಳಿಕೆಯನ್ನೂ ಉಪೇಂದ್ರ ಘೋಷಿಸಲಿದ್ದಾರೆ.
ಇತ್ತೀಚೆಗಷ್ಟೇ ಉಪೇಂದ್ರ ಅವರ ಪಕ್ಷದ ಹೆಸರು ಫೊಷಣೆಯಾಗಿದ್ದು, ಅವರ ಪಕ್ಷದ ಹೆಸರು ಪ್ರಜಾಕಾರಣ ಅಲ್ಲ, ಪ್ರಜಾಕೀಯವೂ ಅಲ್ಲ. ಬದಲಾಗಿ `ಉತ್ತಮ ಪ್ರಜಾ ಪಾರ್ಟಿ’ ಎಂದು ತಿಳಿಸಿದ್ದರು. ಸದಸ್ಯತ್ವ ನೋಂದಣಿ ಅರ್ಜಿಯಲ್ಲೂ ಉಪ್ಪಿ ಪಕ್ಷದ ಹೆಸರು ಬಹಿರಂಗವಾಗಿತ್ತು.
ಪ್ರಜಾಕೀಯ ಆಂದೋಲನದಿಂದ ಸುದ್ದಿ ಮಾಡುತ್ತಿರುವ ಉಪ್ಪಿಯ ಹೊಸ ರಾಜಕೀಯ ಪಕ್ಷದ ಹೆಸರು ತೀವ್ರ ಕುತೂಹಲವನ್ನು ಕೆರಳಿಸಿದೆ. ಈಗಾಗಲೇ ಸಿನಿಮಾ ರಂಗದಲ್ಲಿ ನಟರಾಗಿ, ನಿರ್ದೇಶಕರಾಗಿ ಮತ್ತು ಬರಹಗಾರರಾಗಿ ಉಪ್ಪಿ ಸೇವೆ ಸಲ್ಲಿದ್ದಾರೆ. ಈಗ ಪ್ರಜಾ ಸೇವೆ ಮಾಡಲು ರಾಜಕೀಯಕ್ಕೆ ಬರುತ್ತಿದ್ದಾರೆ.
ಈಗಾಗಲೇ ತಮ್ಮ ಆಪ್ತರ ಜೊತೆ ಸರಣಿ ಸಭೆ ನಡೆಸುತ್ತಿರುವ ಉಪೇಂದ್ರ, ತಮ್ಮ ಹೊಸ ಪಕ್ಷದ ಸದಸ್ಯತ್ವ ಪಡೆಯಲು ಬಯಸುವವರಿಗೆ ಅರ್ಜಿ ರೆಡಿ ಮಾಡಿದ್ದಾರೆ. ಶೀಘ್ರವೇ ರಾಜ್ಯದ ವಿವಿಧೆಡೆ ಸುತ್ತಾಡಿ ಜನರ ಅಭಿಪ್ರಾಯ ಸಂಗ್ರಹಿಸಲು ಉಪೇಂದ್ರ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.