ಉಡುಪಿ: ಬಿ.ಕೆ ಹರಿಪ್ರಸಾದ್ (BK Hariprasad) ಹಿಂದೂವೇ ಅಲ್ಲ. ಅವರು ದೇಶದ್ರೋಹಿ. ಕಾಂಗ್ರೆಸ್ ನಲ್ಲಿ ನಿರ್ಲಕ್ಷಕ್ಕೆ ಒಳಪಟ್ಟ ನಾಯಕ ಇದ್ದರೆ ಅದು ಬಿ.ಕೆ ಹರಿಪ್ರಸಾದ್ ಎಂದು ಶಾಸಕ ಯಶ್ ಪಾಲ್ ಸುವರ್ಣ (Yashpal Suvarna) ವಾಗ್ದಾಳಿ ನಡೆಸಿದ್ದಾರೆ.
ಅಯೋಧ್ಯೆ ಬಿಜೆಪಿ (BJP) ಪಕ್ಷದ ರಾಜಕೀಯ ಮಂದಿರ. ರಾಮಲಲ್ಲಾ ಪ್ರತಿಷ್ಠಾಪನೆ ಮಾಡುವ ಮೋದಿ, ಅಮಿತ್ ಶಾ ಅವರದ್ದು ಯಾವ ಧರ್ಮ ಎಂದು ಹರಿಪ್ರಸಾದ್ ಪ್ರಶ್ನೆ ಮಾಡಿದ್ದಾರೆ. ಈ ವಿಚಾರಕ್ಕೆ ಯಶ್ ಪಾಲ್ ಸುವರ್ಣ ಇಂದು ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್ ನವರೇ ಹರಿಪ್ರಸಾದ್ ಅನ್ನು ಲೆಕ್ಕಿಸುವುದಿಲ್ಲ, ಬದಿಗಿಟ್ಟಿದ್ದಾರೆ. ರಾಮ ಮಂದಿರ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ. ಅಯೋಧ್ಯೆಗೆ ರಾಮಭಕ್ತರು ದೇಶಭಕ್ತರು ಬರಬೇಕು ಎಂದು ಕರೆ ಕೊಟ್ಟಿದ್ದೇವೆ. ದೇಶ ವಿರೋಧಿಗಳು ಬರುವುದು ಬೇಡ. ಬಿಕೆ ಹರಿಪ್ರಸಾದ್ ಒಬ್ಬ ದೇಶದ್ರೋಹಿ. ದೇಶದ್ರೋಹಿಯ ಯಾವ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಗರಂ ಆದರು. ಇದನ್ನೂ ಓದಿ: ಕಾಂಗ್ರೆಸ್ನಿಂದ ರಾಮ ಭಕ್ತರನ್ನು ಹೆದರಿಸುವ ಕೆಲಸ: ಅಶೋಕ್ ಕಿಡಿ
ಗೋದ್ರಾ ಹತ್ಯಾಕಾಂಡಕ್ಕೆ (Godhra train burning case of 2002) ಯಾರು ಕಾರಣ ಎಂದು ಮೊದಲು ವಿಮರ್ಶಿಸಿ. ಕಾಂಗ್ರೆಸ್ ನ (Congress) ದೇಶ ವಿರೋಧಿ ಮನಸ್ಥಿತಿ ಗೋದ್ರಾ ಘಟನೆಗೆ ಕಾರಣ. ಬಿ.ಕೆ.ಹರಿಪ್ರಸಾದ್ ಹಿಂದೂ ಆಗಿ ಬಂದರೆ ಮಾತ್ರ ಸ್ವಾಗತ. ಪಾಕಿಸ್ತಾನಿ ಮನೋಭಾವನೆಯಲ್ಲಿ ಮಾತನಾಡಿದ್ದಾರೆ. ಬಿ. ಕೆ ಹರಿಪ್ರಸಾದ್ ಹಿಂದೂ ಅಲ್ಲ. ಅಯೋಧ್ಯೆಗೆ (Ayodhya) ಬರುವ ಕೋಟಿ ಕೋಟಿ ಭಕ್ತರಿಗೆ ರಾಮ, ಹನುಮಂತ, ಲಕ್ಷ್ಮಣರೇ ಶ್ರೀರಕ್ಷೆ. ದೇವರೇ ಭಕ್ತರಿಗೆ ಭದ್ರತೆ ಒದಗಿಸುತ್ತಾರೆ. ಪೊಲೀಸ್ ಮತ್ತು ಮಿಲಿಟರಿ ಅಗತ್ಯ ಇಲ್ಲ ಎಂದು ಯಶ್ ಪಾಲ್ ಸುವರ್ಣ ಹೇಳಿದರು.