ದಾವಣಗೆರೆ: ಅಯೋಧ್ಯೆಯಲ್ಲಿ (Ayodhya) ರಾಮಮಂದಿರ ಉದ್ಘಾಟನೆಯಾಗುತ್ತಿರುವ ಈ ಸಂದರ್ಭದಲ್ಲಿ ರಾಮ ಭಕ್ತರನ್ನು ಹೆದರಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ವಾಗ್ದಾಳಿ ನಡೆಸಿದ್ದಾರೆ.
ಕರ ಸೇವಕನ ಬಂಧನ ಖಂಡಿಸಿ ಹುಬ್ಬಳಿಗೆ ಪ್ರತಿಭಟನೆಗೆ ತೆರಳುವ ಮುನ್ನ ದಾವಣಗೆರೆಯ (Davanagere) ಜಿಎಂಐಟಿ ಗೆಸ್ಟ್ ಹೌಸ್ಗೆ ಭೇಟಿಕೊಟ್ಟಿದ್ದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಇಡೀ ದೇಶ ರಾಮ ಭಕ್ತರು ಸಂತೋಷದಿಂದ ಇದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ರಾಮಭಕ್ತರನ್ನು ಬೆದರಿಸುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದ್ದು, ರಾಜ್ಯದಲ್ಲಿ ಗಲಭೆ ಸೃಷ್ಠಿಗೆ ಕಾಂಗ್ರೆಸ್ ಕಾರಣವಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಹರಿಪ್ರಸಾದ್ರನ್ನು ಕೂಡಲೇ ಬಂಧಿಸಬೇಕು: ಡಿವಿಎಸ್ ಆಗ್ರಹ
ಕಾಂಗ್ರೆಸ್ (Congress) ಲೋಕಸಭೆಯಲ್ಲಿ ಸೋಲಿನ ಭೀತಿ ಎದುರಿಸುತ್ತಿದೆ. ಎಲ್ಲಾ ಸರ್ವೆಯಲ್ಲೂ ನರೇಂದ್ರ ಮೋದಿ ಪ್ರಧಾನಿಯಾಗುತ್ತಾರೆ ಎಂದು ತಿಳಿದು ಬಂದಿದೆ. ಅದೇ ಕಾರಣಕ್ಕೆ ಕಾಂಗ್ರೆಸ್ ಈ ರೀತಿ ನಡೆದುಕೊಳ್ಳುತ್ತಿದೆ ಎಂದಿದ್ದಾರೆ.
ಸುಪ್ರೀಂ ಕೋರ್ಟ್ನಲ್ಲಿ ರಾಮ ಮಂದಿರ ವಿಚಾರಣೆಗೆ ಬಂದಾಗ ರಾಮಾಯಣವೇ ಇಲ್ಲ. ರಾಮ ಕೇವಲ ಕಲ್ಪನೆ ಎಂದು ಕಾಂಗ್ರೆಸ್ ಹೇಳಿತ್ತು. ಅಯೋಧ್ಯೆಯಲ್ಲಿ ರಾಮ ಮಂದಿರ ಇರುವುದು ಅವರಿಗೆ ಇಷ್ಟ ಇಲ್ಲ. ಅಲ್ಲಿ ಬಾಬ್ರಿ ಮಸೀದಿ ಇರಬೇಕಿತ್ತು. ಅದ್ದರಿಂದ ಹುಬ್ಬಳಿಯಲ್ಲಿ 31 ವರ್ಷದ ನಂತರ ಕರಸೇವಕರ ಮೇಲೆ ಕೇಸ್ ಹಾಕಿ ಬಂಧಿಸಿದ್ದಾರೆ. ಕರ ಸೇವಕರ ಮೇಲೆ ಹಾಕಿದ ಕೇಸ್ಗಳಿಗೆ ಸಾಕ್ಷಿ ಇಲ್ಲ ಎಂದು ಕೋರ್ಟ್ ಹೇಳಿದೆ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯನವರು ಬಿಜೆಪಿಗರಿಗೆ ಕಾನೂನು ಏನ್ ಗೊತ್ತಿದೆ ಎಂದು ಕೇಳಿದ್ದಾರೆ. ನಾನು ಕೂಡ ಕೇಳ್ತಿನಿ ನಿಮಗೆ ಕಾನೂನು ಗೊತ್ತಿದ್ಯಾ? ಅಲ್ಲೇ ಆಟೋ ಓಡಿಸಿಕೊಂಡಿದ್ದವನನ್ನು ತಲೆಮರೆಸಿಕೊಂಡಿದ್ದಾನೆ ಎಂದು ಹೇಳುತ್ತಿದ್ದಾರೆ. ಪೊಲೀಸ್ ಸ್ಟೇಷನ್ ಮುಂದೆ ಓಡಾಡಿಕೊಂಡಿದ್ದವನು ಪೊಲೀಸರ ಕಣ್ಣಿಗೆ ಕಾಣಲಿಲ್ವಾ? ಅವನಿಗೆ ನೋಟಿಸ್ ನೀಡಿಲ್ಲ, ನಾನು ಇವತ್ತು ಅವರ ಮನೆಗಳಿಗೆ ಭೇಟಿ ನೀಡುತ್ತೇನೆ. ಅವರ ಮೇಲಿನ ಕೇಸ್ ವಾಪಸ್ ಪಡೆದು ಆ ಅಧಿಕಾರಿಯ ಸಸ್ಪೆಂಡ್ ಮಾಡಬೇಕು ಎಂದು ಅಗ್ರಹಿಸುತ್ತೇವೆ ಎಂದಿದ್ದಾರೆ.
1700 ಪಿಎಫ್ಐ ಕಾರ್ಯಕರ್ತರ ಮೇಲಿನ 175 ಕೇಸ್ಗಳನ್ನು ವಾಪಸ್ ಪಡೆದುಕೊಂಡಿದ್ದಾರೆ. ಕೇರಳದಲ್ಲಿ ಪಿಎಫ್ಐ ಕಾರ್ಯಕರ್ತರ ಮೇಲೆ 40 ಕೊಲೆ ಪ್ರಕರಣಗಳಿವೆ ಎಂದು ಕೇರಳ ಸರ್ಕಾರ ಹೇಳಿದೆ. ಅಂತವರನ್ನು ಬಿಡುಗಡೆ ಮಾಡುವ ಕೆಲಸ ಮಾಡಲಾಗಿದೆ. ರಾಮಭಕ್ತರನ್ನು ಅರೆಸ್ಟ್ ಮಾಡಿ ಪಿಎಫ್ಐ ದೇಶದ್ರೋಹಿಗಳನ್ನು ಬಿಡುಗಡೆ ಮಾಡಿ ಎಂಬುದು ಕಾಂಗ್ರೆಸ್ನ ಸ್ಲೋಗನ್ ಆಗಿದೆ ಎಂದಿದ್ದಾರೆ.
ಇಡೀ ರಾಜ್ಯದಲ್ಲಿ ಅಯೋಧ್ಯೆ ಅಭಿಯಾನದ ಬಗ್ಗೆ ಭಯಬಿದ್ದು, ಹಿಂದೂಕಾರ್ಯಕರ್ತರು ಮನೆ ಸೇರಿಕೊಳ್ಳಬೇಕು ಎಂದು ಸರ್ಕಾರ ಭಯ ಹುಟ್ಟಿಸುತ್ತಿದೆ. ಹಿಂದೂ ಕಾರ್ಯಕರ್ತರು ಹೆದರುವ ಅವಶ್ಯಕತೆ ಇಲ್ಲ, ನಾವು ನಿಮ್ಮ ಜೊತೆ ಇದ್ದೇವೆ. ತಮ್ಮ ನಾಯಕಿಯನ್ನು ಮೆಚ್ಚಿಸಲು ಸಿದ್ದರಾಮಯ್ಯ ಹಿಂದೂ ಕಾರ್ಯಕರ್ತರನ್ನು ಹೆದರಿಸುವ ತಂತ್ರ ಮಾಡುತ್ತಿದ್ದಾರೆ. ದೇಶದೆಲ್ಲೆಡೆ ರಾಮ ಮಂದಿರದ ಮಂತ್ರಾಕ್ಷತೆ ನೀಡುತ್ತಿದ್ದಾರೆ. ನಾನು ನಮ್ಮ ರಾಜ್ಯದಲ್ಲಿ ಟಿಪ್ಪು ಅಡಳಿತ ನಡೆಸುತ್ತಿದ್ದೇವೆ ನೋಡಿ ಎಂದು ಹೇಳಲು ಸಿಎಂ ಹೊರಟಿದ್ದಾರೆ. ಟಿಪ್ಪು ಒಬ್ಬ ಹೇಡಿ, ಯುದ್ಧ ಮಾಡಲಾಗದೆ ಮಕ್ಳಳನ್ನು ಅಡವಿಟ್ಟವ, ಅಂತವನನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳಿಕೊಂಡವರು ಇವರು ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಮಂತ್ರಾಕ್ಷತೆ ತೆಗೆದುಕೊಂಡವರು ಧೈರ್ಯವಾಗಿ ಪೂಜೆ ಮಾಡಿ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಜನ ಉತ್ತರ ಕೊಡುತ್ತಾರೆ. ಕಾಂಗ್ರೆಸ್ನ ಈ ನಡೆಯನ್ನು ಖಂಡಿಸಿ ರಾಜ್ಯದಲ್ಲಿ ಪ್ರತಿಭಟನೆ ಮಾಡುತ್ತಿದ್ದು, ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಗೋದ್ರಾ ದುರಂತದ ರೀತಿ ಮತ್ತೊಮ್ಮೆ ಏನಾದ್ರೂ ಆಗಬಹುದು: ಬಿ.ಕೆ.ಹರಿಪ್ರಸಾದ್