ಮಂಗಳೂರು: ಹೊಸ ಅನುದಾನ ನೀಡೋದು ಬೇಡ, ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಂಜೂರುಗೊಳಿಸಿದ ಯೋಜನೆಯ ಅನುದಾನ ನೀಡಲಿ ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದಾವ್ಯಾಸ್ ಕಾಮತ್ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆ ಉಡುಪಿ ಜಿಲ್ಲೆ ಉತ್ತರ ಕನ್ನಡ ಜಿಲ್ಲೆಗೆ ಒಂದು ರೂಪಾಯಿ ಕೊಟ್ಟಿದ್ದು ತೋರಿಸಲಿ. ಅನುದಾನ ಸ್ಥಗಿತದಿಂದ ಅಭಿವೃದ್ಧಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕರಾವಳಿ ಭಾಗದಲ್ಲಿ ಬಿಜೆಪಿ ಶಾಸಕರಿದ್ದಾರೆ ಎಂದು ಅನುದಾನ ನೀಡದೆ ನಿರ್ಲಕ್ಷ್ಯ ತೋರಲಾಗುತ್ತಿದೆ ಎಮದು ಆಕ್ರೋಶ ಹೊರಹಾಕಿದ್ದಾರೆ.
ವಿಪಕ್ಷ ನಾಯಕ ಆಯ್ಕೆ ಅದು ನಮ್ಮ ಪಕ್ಷದ ಆಂತರಿಕ ವಿಚಾರ. ಇದರಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಸರಕಾರದ ವಿರುದ್ಧದ ನಮ್ಮ ಹೋರಾಟಕ್ಕೆ ಯಾವುದೇ ತೊಡಕಾಗಿಲ್ಲ ಎಂದರು. ಇದನ್ನೂ ಓದಿ: ‘ಮೈ ಲಾರ್ಡ್’ ಹೇಳೋದು ಬಿಟ್ರೆ ನನ್ನ ಸಂಬಳದಲ್ಲಿ ಅರ್ಧ ಕೊಡ್ತೀನಿ: ಸುಪ್ರೀಂ ಜಡ್ಜ್
ಇದೇ ವೇಳೆ ಮರಳು ಅನುದಾನ ಸ್ಥಗಿತ ವಿಚಾರ ವಿರುದ್ಧ ಕಿಡಿಕಾರಿರುವ ಕಾಮತ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಬಿಗಡಾಯಿಸಿದೆ. ನೇತ್ರಾವತಿ ಹಾಗೂ ಫಲ್ಗುಣಿ ನದಿಯ ಮರಳು ದಿಬ್ಬಗಳನ್ನ ಗುರುತಿಸಿ ವರದಿಯನ್ನ ಕರಾವಳಿ ನಿರ್ವಹಣಾ ಸಮಿತಿಗೆ ಕಳುಹಿಸಲಾಗಿದೆ. ಬಿಲ್ಡಿಂಗ್ ಕಂಟ್ರಾಕ್ಟರ್ಸ್ ಬಳಿ ಕೇಳಿದ್ರೆ ಮರಳಿಲ್ಲ ಎನ್ನುತ್ತಾರೆ. ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಕರಾವಳಿಗೆ ಪ್ರತ್ಯೇಕ ಮರಳು ನೀತಿ ಜಾರಿ ಮಾಡುತ್ತೆ ಎಂದು ಭರವಸೆ ನೀಡಿತ್ತು ಎಂದರು.
ಕೂಲಿ ಕಾರ್ಮಿಕರಿಂದ ಹಿಡಿದು ಕಟ್ಟಡ ಕಾಮಗಾರಿ ವ್ಯಾಪಾರಸ್ಥರಿಗೂ ತೊಂದರೆಯಾಗಿದೆ. ವಲಸೆ ಕಾರ್ಮಿಕರು ತಮ್ಮ ಜಿಲ್ಲೆಗೆ ವಾಪಾಸ್ ಆಗುತ್ತಿದ್ದಾರೆ. ಈಗಾಗಲೇ ಒಂದಕ್ಕೆ ದುಪ್ಪಟ್ಟು ಕೊಟ್ಟು ಬ್ಲ್ಯಾಕ್ ಮಾರ್ಕೆಟ್ ನಿಂದ ಮರಳು ಪಡೆಯಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಇದರ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಮಂಗಳೂರಿನ ಆರ್ಥಿಕ ವ್ಯವಸ್ಥೆಗೆ ಮಾರಕವಾಗಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ 23 ಡಯಾಲಿಸಿಸ್ ಯಂತ್ರಗಳಿದೆ. ಅದರಲ್ಲಿ 9 ಯಂತ್ರ ಔಟ್ ಆಫ್ ಆರ್ಡರ್ ಆಗಿದೆ ಎಂದು ಹೇಳಿದರು.
ಆರೋಗ್ಯ ಮಂತ್ರಿಗಳು ಉಸ್ತುವಾರಿಯಾಗಿರುವ ಜಿಲ್ಲೆಯಲ್ಲಿ ಈ ರೀತಿಯ ಪರಿಸ್ಥಿತಿಯಿದೆ. ಜನರ ಸಂಪೂರ್ಣ ಅರೋಗ್ಯ ಕೆಟ್ಟು ಹೋದ ಮೇಲೇ ಹೊಸ ಯಂತ್ರ ತೆಗೆದುಕೊಳ್ತಾರಾ..?. ಉಸ್ತುವಾರಿ ಸಚಿವರು ಬೇರೇ ಬೇರೇ ಪಾರ್ಟಿಯ ಕೆಲಸಕ್ಕೆ ಹೋಗುವುದನ್ನ ಬಿಟ್ಟು ಇತ್ತ ಗಮನ ಹರಿಸಲಿ ಎಂದು ತಿಳಿಸಿದರು.
Web Stories