Districts
ಹರ್ಯಾಣದಲ್ಲಿ ಹಾಸನ ಯೋಧ ಆತ್ಮಹತ್ಯೆ – ತನಿಖೆ ನಡೆಸುವಂತೆ ಶಾಸಕ ಒತ್ತಾಯ

ಹಾಸನ: ಹರಿಯಾಣದ ಸಿರ್ಸಾದಲ್ಲಿ ವಾಯುಪಡೆ ಸಿಬ್ಬಂದಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಯೋಧನ ಪಾರ್ಥೀವ ಶರೀರ ಹಾಸನಕ್ಕೆ ಬಂದಿದೆ.
ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಮೋಹನ್ ಕುಮಾರ್ ಅಂತ್ಯಕ್ರಿಯೆ ನಡೆಯಲಿದೆ. ಮೋಹನ್ ಅವರ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಶಾಸಕ ಹೆಚ್.ಕೆ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಹಾಗೆಯೇ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
ಏನಿದು ಘಟನೆ?
ಮೋಹನ್ ಕುಮಾರ್ ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಮೋಹನ್ ಎಂಟು ವರ್ಷಗಳಿಂದ ಸಿರ್ಸಾದಲ್ಲಿ ಎಂಬಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಶುಕ್ರವಾರ ಕಚೇರಿಯಲ್ಲೇ ರೈಫಲ್ನಿಂದ ಗುಂಡು ಹಾರಿಸಿಕೊಂಡು ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ನೋಟ್ ಬರೆದಿಟ್ಟಿದ್ದರು. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇದನ್ನೂ ಓದಿ: 3 ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಯೋಧ ಡೆತ್ನೋಟ್ ಬರೆದು ಆತ್ಮಹತ್ಯೆ
ಡೆತ್ನೋಟ್ನಲ್ಲಿ ಏನಿತ್ತು?
ಪ್ರೀತಿಯ ಅಮ್ಮ ಮತ್ತು ಅಪ್ಪನಿಗೆ ನನ್ನ ನಮಸ್ಕಾರಗಳು. ಹುಟ್ಟಿನಿಂದ ಇಲ್ಲಿಯವರೆಗೆ ನಾನು ನಿಮಗೋಸ್ಕರ ಏನು ಮಾಡುವುದಕ್ಕೆ ಆಗಿಲ್ಲ. ಅಪ್ಪ-ಅಮ್ಮನಿಗೆ ಒಳ್ಳೆಯ ಮಗನಾಗದೆ ನಿಮಗೆ ಮೋಸ ಮಾಡಿದ್ದೇನೆ. ಅಣ್ಣನಿಗೆ ಒಳ್ಳೆಯ ತಮ್ಮನಾಗದೆ, ಕೊನೆಗೆ ಹೆಂಡತಿಗೆ ಒಳ್ಳೆಯ ಗಂಡನಾಗಿಲ್ಲ ಅನಿಸುತ್ತಿದೆ. ದಯವಿಟ್ಟು ನನ್ನನ್ನು ಕ್ಷಮಿಸಿ, ಇಷ್ಟುದಿನ ಒಂದು ದಿನವೂ ಕೂಡ ನನ್ನನ್ನು ನೋಯಿಸದೆ ನೋಡಿಕೊಂಡಿದ್ದಕ್ಕೆ ನಿಮಗೆ ಚಿರಋಣಿಯಾಗಿರುತ್ತೇನೆ. ನಿಮ್ಮ ಮನ ಮನಸ್ಸನ್ನು ನೋಯಿಸಿದ್ದಕ್ಕೆ ನಾನು ಕ್ಷಮೆ ಕೋರುತ್ತೇನೆ. ಮುಂದಿನ ಜನ್ಮ ಇದ್ದರೆ ನನಗೆ ನಿಮ್ಮ ಪ್ರೀತಿಯೇ ಸಿಗಲಿ. ಇನ್ನೂ ಮುಂದೆ ನಿಮಗೆ ಯಾವುದೇ ರೀತಿಯ ತೊಂದರೆ ಬರುವುದಿಲ್ಲ. ಅಮ್ಮ, ಅಣ್ಣ, ಅಪ್ಪ, ಯಾವಾಗಲೂ ನಾನು ನಿಮ್ಮ ಮನಸ್ಸಿನಲ್ಲಿಯೇ ಇರುತ್ತೇನೆ. ಮರೆಯದೇ ಕ್ಷಮಿಸಿ ನೆನಪಾದರೆ. Love you amma, love u chinnu take care. I will be soon ನನ್ನಿಂದ ಯಾರಿಗೂ ತೊಂದರೆಯಾಗಬಾರದು ಎಂದು ನೋವಿನಲ್ಲಿ ಬರೆದಿದ್ದರು.
