ಯಾದಗಿರಿ: ಲೋಕಸಭೆ ಚುನಾವಣಾ ಬಳಿಕ ಪ್ರಧಾನಿ ದೇವೇಗೌಡರನ್ನು, ಮಗ ನಿಖಿಲ್ರನ್ನು ಮತ್ತು ಅಣ್ಣಮಗ ಪ್ರಜ್ವಲ್ ಅವರನ್ನು ಎಲ್ಲಿದ್ದಿರಪ್ಪಾ ಅಂತ ಕರೆದು ಹುಡುಕಬೇಕಾದ ಪರಿಸ್ಥಿತಿ ಸಿಎಂ ಕುಮಾರಸ್ವಾಮಿಗೆ ಬರಲಿದೆ ಎಂದು ಸುರಪುರ ಶಾಸಕ ರಾಜುಗೌಡ ವ್ಯಂಗ್ಯವಾಡಿದ್ದಾರೆ.
ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿಖಿಲ್ ಎಲ್ಲಿದ್ದಿಯಪ್ಪ ಡೈಲಾಗ್ ಬಳಸಿ ದೇವೇಗೌಡರ ಕುಟುಂಬವನ್ನು ಲೇವಡಿ ಮಾಡಿದ್ದಾರೆ.
ತಾತ ಮತ್ತು ಇಬ್ಬರೂ ಮೊಮ್ಮಕ್ಕಳು ಸೋಲುವುದು ಖಚಿತವಾಗಿದೆ. ಲೋಕಸಭಾ ಚುನಾವಣೆ ನಂತರ ಅವರನ್ನು ಹುಡುಕಬೇಕಾಗುತ್ತದೆ. 2014ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆದರೆ ದೇಶ ಬಿಡುವುದಾಗಿ ದೇವೇಗೌಡರು ಹೇಳಿದ್ದರು. ಆದರೆ ಅವರೇನು ದೇಶ ಬಿಡಲಿಲ್ಲ. ಈಗ ರೇವಣ್ಣ ಸನ್ಯಾಸಿ ಆಗುತ್ತೇನೆ ಎನ್ನುತ್ತಾರೆ. ಇದರಿಂದಲೇ ಜೆಡಿಎಸ್ನವರಿಗೆ ಎರಡು ನಾಲಗೆ ಇದೆ ಎಂದು ಎನ್ನುವುದು ಗೊತ್ತಾಗುತ್ತದೆ ಎಂದು ದೇವೇಗೌಡರಿಗೆ ಮಾತಿನ ಚಾಟಿ ಬಿಸಿದರು.
ನಿಖಿಲ್ ಎಲ್ಲಿದ್ಯಪ್ಪ ಅಂತ ಸಿನಿಮಾ ಮಾಡಿದರೆ ನೀವು ಅದರಲ್ಲಿ ನಟಿಸುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ಅವರು, ನಾನಲ್ಲ ನಮ್ಮ ಮನೆ ಕೆಲಸದವರು ಕೂಡ ಆ ಚಿತ್ರದಲ್ಲಿ ಪಾತ್ರ ಮಾಡಲು ಇಷ್ಟಪಡಲ್ಲ. ಆದರೆ ಮೋದಿ ಅವರ ಸಿನಿಮಾ ಬಂದರೆ ಅದರಲ್ಲಿ ಬೇಕಾದರೇ ಸೈನಿಕನ ಪಾತ್ರ ಮಾಡುತ್ತೇನೆ ಅಂತ ಹೇಳಿದರು.
ಕಾಂಗ್ರೆಸ್ ನಾಯಕರು ಆಯೋಜಿಸಿರುವ ವೀರಶೈವ ಲಿಂಗಾಯತ ಸಮಾವೇಶದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಗಂಡ ಸತ್ತ ಮೇಲೆ ಹೆಂಡತಿಗೆ ಬುದ್ಧಿ ಬಂದಂತೆ ಲಿಂಗಾಯತ ಧರ್ಮ ಒಡೆಯಲು ಹೋದ ಬಳಿಕ ಕಾಂಗ್ರೆಸ್ ನಾಯಕರಿಗೆ ಈಗ ಬುದ್ಧಿ ಬಂದಿದೆ. ಧರ್ಮ ಒಡೆದವರು ಈಗ ಲೋಕಸಭೆ ಚುನಾವಣೆಯಲ್ಲಿ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಇಂತವರು ಸರ್ವನಾಶ ಅಗಲಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದರು.