ಬಳ್ಳಾರಿ: ಪ್ರಧಾನಿ ನರೇಂದ್ರ ಮೋದಿ ಭಾಷಣದ ರೀತಿಯೇ ಕಾರ್ಮಿಕ ಸಚಿವ ಸಂತೋಷ್ ಲಾಡ್ ಭಾಷಣ ಮಾಡಿ ಮೋದಿಯನ್ನು ಲೇವಡಿ ಮಾಡಿದ್ದಾರೆ.
ನೂತನವಾಗಿ ರಚನೆಯಾದ ಕೂಟ್ಟೂರು ತಾಲೂಕು ಉದ್ಘಾಟನೆ ಮಾಡಿ ಸಚಿವರು ಸರ್ಕಾರದ ಸಾಧನೆ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ಸಚಿವರ ಭಾಷಣದ ಮಧ್ಯೆ ರೈತರೊಬ್ಬರು ಬೆಳೆ ವಿಮೆ ದೊರೆಯದ ಬಗ್ಗೆ ಸಚಿವರನ್ನು ಪ್ರಶ್ನೆ ಮಾಡಿದರು. ಈ ವೇಳೆ ಸಚಿವ ಸಂತೋಷ್ ಲಾಡ್, ಮೋದಿಯವರ ಭಾಷಣದ ತರಹವೇ ಫಸಲ್ ಭೀಮಾ ಯೋಜನಾ… ಫಸಲ್ ಭೀಮಾ ಯೋಜನಾ…. ಅಂತಾ ಅಣಕಿಸಿದರು. ಮೇರೆ ಭಾಯಿಯೋ ಔರ್ ಬೆಹೆನೋ ಅಂತಾ ಭಾಷಣ ಮಾಡುತ್ತಾ ಮೋದಿಯನ್ನು ಲೇವಡಿ ಮಾಡಿದ್ರು. ಅಲ್ಲದೇ ಮೋದಿ ಭಾಷಣ ಕೇಳಿ ಕೇಳಿ ಕಿವಿಯಲ್ಲಿ ರಕ್ತ ಬಂದಿದೆ ಎಂದು ಪ್ರಧಾನಿಯ ವಿರುದ್ಧ ಕಿಡಿಕಾರಿದ್ರು.
ಸಚಿವ ಸಂತೋಷ್ ಲಾಡ್ ಮೋದಿ ತರಹವೇ ಭಾಷಣ ಮಾಡುತ್ತಿದ್ದಂತೆ ಸಮಾರಂಭದಲ್ಲಿದ್ದ ಜನರು ಕೇಕೆ ಹಾಕಿ ಚಪ್ಪಾಳೆ ತಟ್ಟಿದ್ರು. ಮೋದಿ ಭಾಷಣ ಅಷ್ಟೆ ಅಲ್ಲ ಬಿಜೆಪಿ ಸರ್ಕಾರದ ವಿರುದ್ಧವೂ ಸಚಿವರು ಆಕ್ರೋಶ ವ್ಯಕ್ತಪಡಿಸುತ್ತಾ, ಬಿಜೆಪಿ ಸರ್ಕಾರವಿದ್ದಾಗ ಬರೀ ತಾಲೂಕಿನ ಘೋಷಣೆ ಮಾಡಿ ಅನುದಾನ ನೀಡಲಿಲ್ಲ. ಆದ್ರೆ ಸಿದ್ದರಾಮಯ್ಯ ಸರ್ಕಾರ ಘೋಷಣೆಯಾದ ಹೊಸ ತಾಲೂಕುಗಳಿಗೆ ಅನುದಾನ ನೀಡುವ ಮೂಲಕ ಕೆಲಸ ಆರಂಭಿಸಿದೆ ಎಂದರು.
ಈ ವೇಳೆ ವೇದಿಕೆಯಲ್ಲಿದ್ದ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಎಂಎಂಜೆ ಹರ್ಷವರ್ಧನ, ಸಚಿವರ ಭಾಷಣಕ್ಕೆ ವೇದಿಕೆಯಲ್ಲೆ ತಿರುಗೇಟು ನೀಡಿದ್ರು. ಕಂಪ್ಲಿ, ಕುರಗೋಡ ತಾಲೂಕುಗಳು ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಸರ್ಕಾರದಲ್ಲೇ ತಾಲೂಕುಗಳಾಗಿವೆ. ಆದ್ರೆ ಕೆಲಸ ಆರಂಭಿಸಲು ತಾವೇಕೆ ತಡ ಮಾಡಿದ್ರಿ ಎಂದು ಪ್ರಶ್ನೆ ಮಾಡಿದ್ರು.
https://www.youtube.com/watch?v=166YoT43z7I&feature=youtu.be