ಕಾರವಾರ: ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಕಾರವಾರದ ಮೂಡಲಮಕ್ಕಿ ಗ್ರಾಮದಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ ಗ್ಯಾಸ್ ವಿತರಣಾ ಕಾರ್ಯಕ್ರಮಕ್ಕೆ ಮಳೆಯ ಅವಾಂತರದಿಂದ ಭಾಷಣ ಮಾಡಲು ಮೈಕ್ ಇಲ್ಲದೇ ಸಚಿವರು ಗರಂ ಆಗಿ ಕಾರ್ಯಕ್ರಮದಿಂದ ಹೊರನಡೆದ ಘಟನೆ ನಡೆದಿದೆ.
ಇತ್ತ ತಮಗೆ ಗ್ಯಾಸ್ ಸಿಗಲಿಲ್ಲ ಎಂದು ಜನ ಮಳೆಯಲ್ಲಿಯೇ ಕಾರವಾರದ ಶಾಸಕಿ ರೂಪಾಲಿ ನಾಯ್ಕ ಹಾಗೂ ಸಚಿವರ ಮುಂದೆಯೇ ಕೈ ಕೈ ಮಿಲಾಯಿಸಿ ಹೊಡೆದಾಡಿಕೊಂಡ ಘಟನೆ ಕೂಡ ನಡೆದಿದೆ.
ಇಂದು ಕಾರವಾರದ ಮೂಡಲಮಕ್ಕಿನಲ್ಲಿ ಬಡವರಿಗೆ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಳೆ ಸುರಿದಿದೆ. ಹೀಗಾಗಿ ಸರತಿಯಲ್ಲಿ ನಿಂತಿದ್ದ ಜನರು ಕೊಡೆ ಹಿಡಿದು ಕೂತಿದ್ದರು. ಆದರೆ ತಮಗಾಗಿ ಮಳೆಯಲ್ಲಿಯೂ ಕುಳಿತ ಜನರನ್ನು ಲೆಕ್ಕಿಸದೇ ಸಚಿವರು ಮೈಕ್ ವ್ಯವಸ್ಥೆಯಿಲ್ಲ ಎಂದು ಗರಂ ಆಗಿದ್ದಾರೆ.
ಸಚಿವರು ಕೇವಲ ನಾಲ್ಕು ಜನರಿಗೆ ಗ್ಯಾಸ್ ಕಿಟ್ ವಿತರಿಸಿ ಹೊರನಡೆದಿದ್ದರಿಂದ ಅಸಮಧಾನಗೊಂಡ ಯೋಜನೆಯ ಫಲಾನುಭವಿಗಳಿಬ್ಬರು ತಮಗೆ ಸಿಗಲಿಲ್ಲ ಎಂದು ಬಡಿದಾಡಿಕೊಂಡಿದ್ದಾರೆ. ಅಲ್ಲೇ ಇದ್ದ ಬಿಜೆಪಿ ಮುಖಂಡರು ಅವರನ್ನು ಸಮಾಧಾನಪಡಿಸಿ ಅಸಮಧಾನಕ್ಕೆ ತೆರೆ ಎಳೆದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv