ಅಮಂಡ್ಯ: ಇತಿಹಾಸ ಎಷ್ಟು ಸರಿ ಎಷ್ಟು ಸರಿಯಿಲ್ಲ ಅನ್ನೋದು ಯಾರಿಗೂ ಶೇ.100 ಗೊತ್ತಿರಲ್ಲ. ಈ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳುವಾಗ ಎಲ್ಲರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು. ಏಕಪಕ್ಷೀಯವಾಗಿ ನಿರ್ಧಾರ ಮಾಡುವುದು ತಪ್ಪಾಗುತ್ತದೆ ಎಂದು ಪಠ್ಯದಿಂದ ಟಿಪ್ಪು ಸುಲ್ತಾನ್ ಇತಿಹಾಸ ಕೈಬಿಡುವ ವಿಚಾರವಾಗಿ ಸಂಸದೆ ಸುಮಲತಾ ಅವರು ಪ್ರತಿಕ್ರಿಯಿಸಿದ್ದಾರೆ.
ಮಂಡ್ಯದ ರೈಲು ನಿಲ್ದಾಣದಲ್ಲಿ ಮೆಮೋ ರೈಲಿನ ಮಹಿಳಾ ವಿಶೇಷ ಬೋಗಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿ ಮಾತನಾಡಿದ ಅವರು, ಮೆಮು ರೈಲಿಗೆ ಅಳವಡಿಸಿದ ಮಹಿಳಾ ಮೀಸಲು ಬೋಗಿಗಳಿಗೆ ಚಾಲನೆ ನೀಡಿದ್ದು ತುಂಬಾ ಖುಷಿಯಾಗಿದೆ. ಇದು ಹೆಮ್ಮೆಯ ವಿಷಯ ನಾನು ಚುನಾವಣೆ ಸಮಯದಲ್ಲಿ ಪ್ರಚಾರ ಮಾಡುವ ವೇಳೆ ಜಿಲ್ಲೆಯ ಮಹಿಳೆಯರು ವಿಶೇಷ ಮಹಿಳಾ ಮೀಸಲು ಬೋಗಿಗಾಗಿ ಮನವಿ ಮಾಡಿದ್ದರು ಎಂದು ತಿಳಿಸಿದರು. ಇದನ್ನು ಓದಿ: ಸಂಸದೆಗಾಗಿ 10 ಮೀಟರ್ ಮುಂದೆ ಬಂತು ಮೆಮೋ ರೈಲು
ನಾನು ಈ ವಿಚಾರವಾಗಿ ರೈಲ್ವೆ ಸಚಿವರಾದ ಪಿಯುಷ್ ಗೋಯಲ್ ಹಾಗೂ ಸುರೇಶ್ ಅಂಗಡಿ ಅವರಲ್ಲಿ ಮನವಿ ಮಾಡಿದ್ದೆ. ನನ್ನ ಮನವಿಯಂತೆ ಮೆಮೋ ರೈಲಿಗೆ ಎರಡು ಬೋಗಿಗಳನ್ನು ಅಳವಡಿಸಲು ಅವಕಾಶ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಅವಶ್ಯಕತೆ ಇದ್ದರೆ ಹೆಚ್ಚಿನ ಬೋಗಿ ಅಳವಡಿಸಲಾಗುವುದು ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಆರ್.ಸಿ.ಇ.ಪಿ ಒಪ್ಪಂದದ ವಿಚಾರವಾಗಿ ಮಾತನಾಡಿದ ಅವರು ನಮ್ಮ ರೈತರಿಗೆ ನಮ್ಮ ಜನಕ್ಕೆ ನಷ್ಟ ಆಗುವ ಕೆಲಸವನ್ನು ಮೋದಿ ಅವರು ಮಾಡಲ್ಲ ಎಂಬ ನಂಬಿಕೆ ನನಗಿದೆ. ಒಂದು ವೇಳೆ ಈ ಒಪ್ಪಂದದಿಂದ ರೈತರಿಗೆ ನಷ್ಟ ಆಗುವುದಾದರೆ ನಾನು ರೈತರ ಪರ ನಿಲ್ಲುತ್ತೇನೆ ಎಂದು ಹೇಳಿದರು.