ಮಂಡ್ಯ: ಕಾಮದಾಸೆಗೆ ಸ್ವಂತ ಮಗನ ಹೆಂಡತಿಯನ್ನೇ ಕೊಲೆ ಮಾಡಿದ್ದ ಮಾವ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯದ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.
ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ನಾಗರಾಜು, ತನ್ನ ಮಗ ಅನಿಲ್ ಪತ್ನಿ ವೀಣಾ ರನ್ನು ನವೆಂಬರ್ 9 ರಂದು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ. ಈ ವಿಚಾರವಾಗಿ ನನ್ನ ಅಪ್ಪನೇ ತನ್ನ ಹೆಂಡತಿಯನ್ನು ಅಕ್ರಮ ಸಂಬಂಧಕ್ಕೆ ಸ್ಪಂದಿಸದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾನೆ ಎಂದು ವೀಣಾ ಪತಿ ಅನಿಲ್ ಆರೋಪ ಮಾಡಿದ್ದರು. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣ ಸಂಬಂಧ ಆರೋಪಿ ನಾಗರಾಜನನ್ನು ಬಂಧಿಸಿದ್ದ ಪೊಲೀಸರು ವಿಚಾರಣೆ ನಡೆಸಿದ ಬಳಿಕ ಕೋರ್ಟ್ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಮಂಡ್ಯದ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ನಾಗರಾಜು ಇಂದು ಮುಂಜಾನೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾನೆ. ಅವರನ್ನು ತಕ್ಷಣ ಪೊಲೀಸರು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ನಾಗರಾಜು ಸಾವನ್ನಪ್ಪಿದ್ದಾನೆ.
ಕಳೆದ ಹಲವು ದಿನಗಳಿಂದ ನಾಗರಾಜು ವೀಣಾಳ ಗಂಡ ಅನಿಲ್ ಇಲ್ಲದ ವೇಳೆ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದ. ಇದರಿಂದ ವೀಣಾ ಮನನೊಂದ್ದಿದಳು. ನವೆಂಬರ್ 9 ಶನಿವಾರ ರಾತ್ರಿ ಯಾರು ಇಲ್ಲದ ವೇಳೆ ನಾಗರಾಜು ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದಾನೆ. ಈ ವೇಳೆ ವಿರೋಧ ಮಾಡಿದ ಸೊಸೆ ವೀಣಾಳನ್ನು ನಾಗರಾಜು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ.