ಬೆಂಗಳೂರು: ಎಲ್ಲೆಡೆ ಯುಗಾದಿ ಹಬ್ಬ, ಹೊಸ ವರ್ಷದ ಸಂಭ್ರಮ. ಹಬ್ಬದ ಮನರಂಜನೆಗಾಗಿ ಸ್ನೇಹಿತರೊಂದಿಗೆ ಇಸ್ಪೀಟ್ ಆಟಕ್ಕೆ ಇಳಿದವನ ಜೀವನವೇ ಅಂತ್ಯವಾಗಿದೆ.
ರಮೇಶ್ ಎಂಬಾತನೇ ಸ್ನೇಹಿತರಿಂದಲೇ ಕೊಲೆಯಾದ ದುರ್ದೈವಿ. ತಡರಾತ್ರಿ ನಗರದ ಹೊಸಕೆರೆಹಳ್ಳಿ ಬಳಿ ರಮೇಶ್ ತನ್ನ ಗೆಳಯರೊಂದಿಗೆ ಇಸ್ಪೀಟ್ ಆಟವಾಡುತ್ತಿದ್ದ. ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನೊಬ್ಬ ರಮೇಶ್ ತಲೆಗೆ ರಾಡ್ ನಿಂದ ಹೊಡೆದು ಚಾಕು ಚುಚ್ಚಿ ಕೊಲೆ ಮಾಡಿದ್ದಾರೆ. ಕೊಲೆಯ ಬಳಿಕ ಶವವನ್ನ ರಾಜರಾಜೇಶ್ವರಿ ನಗರದ ಕೃಷ್ಣಪ್ಪ ಲೇಔಟ್ ಬಳಿ ಎಸೆದು ಹೋಗಿದ್ದಾರೆ.
ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ರಮೇಶ್ ಮತ್ತು ಆತನ ಸ್ನೇಹಿತರು ಶನಿವಾರ ಕೃಷ್ಣಪ್ಪ ಲೇಔಟ್ ಬಳಿ ಮಂಡ್ಯ ಬಾರ್ ನಲ್ಲಿ ಕುಡಿದಿದ್ದಾರೆ. ಬಳಿಕ ಹೊಸಕೆರೆಹಳ್ಳಿ ಬಳಿ ಎಲ್ಲರೂ ಇಸ್ಪೀಟ್ ಆಡಿದ್ದಾರೆ. ಆಟದಲ್ಲಿ ಗೆದ್ದಿದ್ದ ರಮೇಶ್ ನಂತರ ತನಗೆ ಸಾಕು ತಾನು ಹೊರಡ್ತೀನಿ ಅಂದಿದ್ದಾನೆ. ಗೆದ್ದ ಬಳಿಕ ರಮೇಶ್ ಹೊರಡ್ತೀನಿ ಅಂದಿದ್ದು ಜೊತೆಗಿದ್ದವರ ಕೆಂಗಣ್ಣಿಗೆ ಗುರಿಯಾಗಿದೆ. ಆಟ ಮುಂದುವರೆಸುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ರಮೇಶ್ ನಿರಾಕರಿಸಿದಾಗ ಮಾತಿಗೆ ಮಾತು ಬೆಳೆದು ರಮೇಶ್ ತಲೆಗೆ ರಾಡ್ ನಿಂದ ಹೊಡೆದು, ಚಾಕುವಿನಿಂದ ಚುಚ್ಚಿ ಕೊಲೆಗೈದಿದ್ದಾರೆ.
ಕೊಲೆಯ ಬಳಿಕ ಮೊದಲು ಕುಡಿದಿದ್ದ ಬಾರ್ ಗೆ ಕೂಗಳತೆ ದೂರದಲ್ಲೇ ಶವವನ್ನ ತಂದು ಎಸೆದು ಆರೋಪಿಗಳೆಲ್ಲ ಪರಾರಿಯಾಗಿದ್ದಾರೆ. ಇಂದು ಬೆಳಿಗ್ಗೆ ಶವ ನೋಡಿದ ಸ್ಥಳೀಯರು ಆರ್ ಆರ್ ನಗರ ಠಾಣೆಗೆ ವಿಷಯ ತಲುಪಿಸಿದ್ದಾರೆ. ಸ್ಥಳಕ್ಕೆ ಬಂದು ಪೊಲೀಸರು ಶವವನ್ನು ಮರೋಣತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ, ತನಿಖೆ ನಡೆಸುತ್ತಿದ್ದಾರೆ. ರಮೇಶ್ ಜೊತೆಗಿದ್ದ ಸ್ನೇಹಿತರ ಮಾಹಿತಿ ತನಿಖೆಯಿಂದ ಹೊರ ಬರಬೇಕಿದೆ.