ರಾಂಚಿ: ಸ್ನಾನ ಮಾಡಲು ನೀರು ತಂದು ಕೊಡಲು ನಿರಾಕರಿಸಿದ್ದರಿಂದ ಸಿಟ್ಟಿಗೆದ್ದ ಯುವಕನೊಬ್ಬ ತನ್ನ 21 ವರ್ಷದ ಪ್ರಿಯತಮೆ ಹಾಗೂ ಆಕೆಯ ರೂಮೆಟ್ ಗೆ ಚಾಕು ಇರಿದ ಅಮಾನವೀಯ ಘಟನೆಯೊಂದು ನಡೆದಿದೆ.
ಈ ಘಟನೆ ಜಾರ್ಖಂಡ್ ಜಿಲ್ಲೆಯ ಪಶ್ಚಿಮ ಸಿಂಗ್ಭುಮ್ ನಲ್ಲಿ ಭಾನುವಾರ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಪ್ರಿಯತಮೆ ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಆಕೆಯ ರೂಮೆಟ್ ಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿ ಇಂದ್ರಜಿತ್ ಮಹತಾ ತಿಳಿಸಿದ್ದಾರೆ.
ಯುವತಿಯರಿಬ್ಬರು ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈ ಮನೆಗೆ ಆರೋಪಿ ಆಗಾಗ ಬರುತ್ತಿದ್ದನು. ಶನಿವಾರ ಸಂಜೆ ಯುವತಿಯರಿಬ್ಬರು ಶಾಪಿಂಗ್ ಮಾಡಲು ಹೊರಗಡೆ ತೆರಳಿದ್ದು, ಮರಳಿ ಬಂದಿದ್ದಾರೆ. ಈ ವೇಳೆ ಆರೋಪಿ ಮನೆಗೆ ಬಂದಿದ್ದಾನೆ. ಅಲ್ಲದೇ ತನಗೆ ಈಗಲೇ ಸ್ನಾನ ಮಾಡಬೇಕು ಬಾವಿಯಿಂದ ನೀರು ತಂದುಕೊಡು ಎಂದು ಹೇಳಿದ್ದಾನೆ. ಆದರೆ ಈತನ ಮಾತನ್ನು ಪ್ರಿಯತಮೆ ನಿರಾಕರಿಸಿದ್ದಾಳೆ. ಅಲ್ಲದೇ ನೀನೇ ಹೋಗಿ ನೀರು ತೆಗೆದುಕೊಂಡ ಬಾ ಎಂದು ಹೇಳಿದ್ದಾಳೆ. ಇದೇ ಸಂದರ್ಭದಲ್ಲಿ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಮಾತಿಗೆ ಮಾತು ಬೆಳೆದಿದ್ದರಿಂದ ಸಿಟ್ಟುಗೊಂಡ ಆರೋಪಿ ಅಲ್ಲೇ ಇದ್ದ ಚಾಕು ತೆಗೆದುಕೊಂಡು ಪ್ರಿಯತಮೆಗೆ ಹಾಗೂ ಆಕೆಯ ರೂಮೆಟ್ ಗೆ ಇರಿದಿದ್ದಾನೆ. ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.
ಚಾಕು ಇರಿದಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ 22 ವರ್ಷದ ರೂಮೆಟ್ ನನ್ನು ಕೂಡಲೇ ಚದ್ರಧರ್ಪುರದಲ್ಲಿರುವ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇತ್ತ ಮೃತಪಟ್ಟ ಯುವತಿಯನ್ನು ದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ.