ಚಿಕ್ಕಮಗಳೂರು: ಒಂಬತ್ತು ವರ್ಷದ ಹುಡುಗಿಯನ್ನು ಎತ್ತುಕೊಂಡು ಹೋಗಿ ಆಸ್ತಿ ಬರೆಸಿದ್ರಲ್ಲಾ ಅದಕ್ಕೆ ಡಿ.ಕೆ ಶಿವಕುಮಾರ್ (DK Shivakumar) ಅವರ ಕೈಯನ್ನ ಬಲಪಡಿಸಬೇಕಾ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (HD Devegowda) ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಮೈತ್ರಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ (Kota Srinivas poojary) ಪರ ಮತಯಾಚನೆ ಮಾಡಿದ ದೇವೇಗೌಡರು, ಒಕ್ಕಲಿಗ ಸಮುದಾಯ ಹೆಚ್ಚಿರುವ ಕಡೆ ನನ್ನ ಕೈ ಬಲಪಡಿಸಿ ಎಂದು ಹೇಳುತ್ತಿರುವ ಡಿ.ಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದರು. ಅವರ ಕೈಯನ್ನ ಏಕೆ ಬಲಪಡಿಸಬೇಕು? 9 ವರ್ಷದ ಹುಡುಗಿಯನ್ನು ಎತ್ತುಕೊಂಡು ಹೋಗಿ ಆಸ್ತಿ ಬರೆಸಿಕೊಂಡರಲ್ಲಾ ಅದಕ್ಕಾ ಎಂದು ಪ್ರಶ್ನಿಸಿದ್ದಾರೆ.
ರಾಮನಗರದ ಬಿಡದಿ ಬಳಿ ಅಮೆರಿಕದಿಂದ ಹಣ ಸಂಪಾದನೆ ಮಾಡಿಕೊಂಡು ಬಂದ ಮನುಷ್ಯನ ಆಸ್ತಿ ಬರೆಸಿಕೊಂಡಿದ್ದರು. ನನ್ನ ಬಳಿ ಎಲ್ಲಾ ದಾಖಲೆಗಳಿವೆ. ಬಿಡದಿ ಹತ್ರ ರಸ್ತೆ ಪಕ್ಕದಲ್ಲಿ ಅವರು ಒಂದು ಐಟಿ ಕಂಪನಿಯನ್ನ ಸ್ಥಾಪನೆ ಮಾಡಿದರು. ಅದರ ಹಿಂದಿನ ದಿನ ಇವರು ಒಂದು ಸುಳ್ಳು ಕ್ರಯ ಪತ್ರ ಮಾಡುತ್ತಾರೆ. ಆಮೇಲೆ ಅವರ 9 ವರ್ಷದ ಮಗಳನ್ನ ತೆಗೆದುಕೊಂಡು ಹೋಗಿ ಪಕ್ಕದ ಮನೆಯಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ಇಡುತ್ತಾರೆ. ನಿನ್ನ ಮಗಳು ಬೇಕು ಅಂದ್ರೆ ಸಹಿ ಮಾಡು ಎಂದು ಧಮ್ಕಿ ಹಾಕುತ್ತಾರೆ. ಆ ತಾಯಿ ಎಲ್ಲಾ ಬರೆದುಕೊಡು, ನನ್ನ ಮಗಳ ಕರೆದುಕೊಂಡು ಬಾರಪ್ಪಾ ಅಂತ ಆಕೆ ಗಂಡನ ಕಾಲು ಹಿಡಿಯುತ್ತಾಳೆ. ನನ್ನ ಬಳಿ ದಾಖಲೆ ಇದೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಲ್ಲಿಗೆ ಹೋದಾಗ, ಆ ಮಗುವನ್ನ ದೂರ ಕೂರಿಸಿ ಕಣ್ಣಿಗೆ ಕಟ್ಟಿದ್ದ ಬಟ್ಟೆ ಬಿಚ್ಚುತ್ತಾರೆ. ಆ ಮಗು ಅಪ್ಪ ಅಂತ ಓಡಿ ಬರುತ್ತೆ, ಮತ್ತೆ ಆ ಮಗುವನ್ನ ಒಳಗೆ ಕರೆದುಕೊಂಡು ಹೋಗುತ್ತಾರೆ. ಇದನ್ನ ಎಲೆಕ್ಷನ್ ನಲ್ಲಿ ಬಳಸಿ ಅಂತ ಲಾಯರ್ ತಂದು ಕೊಟ್ಟರು. ಆ ಪುಣ್ಯಾತ್ಮ ನಾನು ಕರ್ನಾಟಕದಲ್ಲಿ ಯಾರಿಗೂ ಮತ ಹಾಕಲ್ಲ. ನಾನು ವೋಟರ್ ಲಿಸ್ಟ್ ನಲ್ಲಿ ಇಲ್ಲ. ಈ ಕರ್ನಾಟಕದ ಸಹವಾಸ ಸಾಕು ಅಂತಾರೆ. ನನಗೆ ಅವರ ಹೆಸರು ಮರೆತು ಹೋಗಿದೆ. ಆಮೇಲೆ ಅವರು ಜೀವನಕ್ಕಾಗಿ ಬೇರೆಯವರ ಅಧೀನದಲ್ಲಿ ಕೆಲಸ ಮಾಡ್ತಾರೆ ಎಂದು ಹೆಚ್ಡಿಡಿ ಗರಂ ಆದರು. ಇದನ್ನೂ ಓದಿ: ಅಮೇಠಿಯಿಂದ ಸ್ಪರ್ಧೆ ಮಾಡ್ತೀರಾ ಎಂದು ಕೇಳಿದ್ದಕ್ಕೆ ಇದು ಬಿಜೆಪಿ ಪ್ರಶ್ನೆಯೆಂದ ರಾಹುಲ್
ಆಮೇಲೆ ಹೇ… ಇದನ್ನ ಹೊರಗೆ ಹೇಳಿದ್ರೆ ಏನಾಗುತ್ತೆ ಗೊತ್ತಾ ಅಂತ ಕಬ್ಬನ್ ಪಾರ್ಕ್ ನಲ್ಲಿ ಅವರಿಗೆ ಹೆದರಿಸುತ್ತಾರೆ. ಅವರಿಗೆ ಚೆಕ್ ಕೊಟ್ಟಿದ್ದರು. 16 ಮತ್ತು 4 ಲಕ್ಷಕ್ಕೆ. ಆದರೆ, ಎರಡೂ ಲ್ಯಾಪ್ಸ್ ಆಗುತ್ತದೆ. ಅವರು ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ಗೆಲ್ಲುತ್ತಾರೆ. ಡಿಕೆಶಿ ಅವರಿಗೆ ಮುಖ ಭಂಗ ಆಗುತ್ತೆ. ಹೈಕೋರ್ಟ್, ಸುಪ್ರೀಂಕೋರ್ಟಿಗೆ ಹೋದ್ರು ಮುಖಭಂಗ ಆಯ್ತು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಧ್ಯಕ್ಷರು ಅಬ್ಬಾ. ಅವರು, ಸೋನಿಯಾ, ರಾಹುಲ್ ಅವರಿಗೆ ಬಹಳ ಸಮೀಪ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಗಂಭೀರ ಆರೋಪದ ವಾಗ್ದಾಳಿ ನಡೆಸಿದರು.