ಹಿರಿಯ ನಟಿ ಲೀಲಾವತಿ (Leelavathi) ಅವರಿಗೆ ಸಿಗಬೇಕಾದ ಗೌರವ, ಪ್ರಶಸ್ತಿಗಳು ಸಿಗದೇ ಇದ್ದರೂ ಮೂರು ದಿನಗಳ ಹಿಂದೆಯಷ್ಟೇ ಪ್ರತಿಷ್ಠಿತ ನಂದಿ ಅವಾರ್ಡ್ ಅವರಿಗೆ ಒಲಿದು ಬಂದಿತ್ತು. ಈಗಷ್ಟೇ ಶುರು ಮಾಡಿರುವ ನಂದಿ (Nandi) ಪ್ರಶಸ್ತಿ ಸಂಸ್ಥೆಯು ಲೀಲಾವತಿ ಅವರಿಗೆ ಲೆಜೆಂಡರಿ ಆಕ್ಟ್ರೆಸ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಅವರಿಗೆ ಅನಾರೋಗ್ಯದ ಕಾರಣದಿಂದಾಗಿ ಪುತ್ರ ವಿನೋದ್ ರಾಜ್ ಆ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.
ಕನ್ನಡ ಚಿತ್ರರಂಗದಲ್ಲಿ (Sandalwood) ಮೊದಲ ಬಾರಿಗೆ ನಂದಿ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ಒರಿಯನ್ ಮಾಲ್ನಲ್ಲಿ ಜರುಗಿತ್ತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಟ ರವಿಚಂದ್ರನ್, ರಿಷಬ್ ಶೆಟ್ಟಿ, ಧ್ರುವ ಸರ್ಜಾ ಇನ್ನೂ ಹಲವು ತಾರೆಯರು ಭಾಗಿಯಾಗಿದ್ದಾರೆ. ಜೊತೆಗೆ ಹಿರಿಯ ನಟ ಶ್ರೀನಾಥ್, ನಟಿ ಪ್ರೇಮ, ವಿನೋದ್ ರಾಜ್, ಅನುಪ್ರಭಾಕರ್, ಉಮಾಶ್ರೀ ಇನ್ನೂ ಹಲವು ನಟ-ನಟಿಯರು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದು ಮೊದಲ ನಂದಿ ಫಿಲಂ ಅವಾರ್ಡ್ ಆಗಿದ್ದು ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ನಟ ರವಿಚಂದ್ರನ್ ಮಾತನಾಡಿ, ‘ನಂದಿ ಪ್ರಶಸ್ತಿ ನೀಡುತ್ತಿರುವುದು ಬಹಳ ಖುಷಿಯಾಗಿದೆ. ಪ್ರಶಸ್ತಿ ಬಹಳ ಭಾರವಾಗಿದೆ ಅದು ನನಗೆ ಖುಷಿ ಕೊಟ್ಟಿತು, ನನ್ನಂಥಹಾ ಶಿವ ಭಕ್ತನಿಂದ ನಂದಿ ಪ್ರಶಸ್ತಿ ಕೊಡಿಸುತ್ತಿದ್ದೀರ. ಎಲ್ಲರ ಮನೆಗಳಿಗೂ ನಂದಿ ಸೇರುತ್ತದೆ ಎಂಬುದು ನನಗೆ ಖುಷಿ’ ಎಂದರು. ನಟ ಶ್ರೀನಾಥ್ ಅವರಿಗೆ ಜೀವನಮಾನ ಸಾಧನೆಗೆ ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್ ಕೂಡ ನೀಡಲಾಗಿತ್ತು.
ಲೀಲಾವತಿ ಅವರಿಗೆ ಈಗಾಗಲೇ ಜೀವಮಾನ ಸಾಧನೆಗಾಗಿ ಕರ್ನಾಟಕ ಸರಕಾರವು ಡಾ.ರಾಜಕುಮಾರ್ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಅಲ್ಲದೇ, ತುಮಕೂರು ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ. ಸಿನಿಮಾ ನಟನೆಗಾಗಿ ಹತ್ತು ಹಲವು ಪ್ರಶಸ್ತಿಗಳನ್ನೂ ಅವರು ಪಡೆದಿದ್ದಾರೆ.