ಹಾಸನ: ಟಿಪ್ಪು ಜಯಂತಿಯನ್ನು ಸರ್ಕಾರ ಏಕೆ ಇಷ್ಟು ತೀವ್ರ ವಿರೋಧದ ನಡುವೆ ಏಕೆ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆಯೋ ಗೊತ್ತಿಲ್ಲ. ಹಾಗೆಯೇ ಟಿಪ್ಪುಗೂ ಸಿದ್ದರಾಮಯ್ಯಗೂ ಅದೇನು ಸಂಬಂಧವೋ ಭಗವಂತನಿಗೆ ಗೊತ್ತು. ಟಿಪ್ಪು ಹಿಡಿದುಕೊಂಡ ಸಿದ್ದರಾಮಯ್ಯ, ಮಲ್ಯ ಹಾಳಾದ್ರು, ಈಗ ಕುಮಾರಸ್ವಾಮಿಯೂ ಹಾಳಾಗುತ್ತಾರೆ ಎಂದು ಬಿಜೆಪಿ ಮುಖಂಡ ಕೆಎಸ್ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.
ಇಂದು ಹಾಸನಾಂಭ ದೇವಾಲಯಕ್ಕೆ ಭೇಟಿ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಟಿಪ್ಪು ಜಯಂತಿ ವಿರೋಧ ಮಾಡಿದ್ದ ಕುಮಾರಸ್ವಾಮಿ ಈಗ ಮತ್ತೆ ಜಯಂತಿ ಮಾಡಲು ಹೊರಟಿದ್ದಾರೆ. ಬಿಜೆಪಿ ಮುಸಲ್ಮಾನರ ವಿರೋಧಿಯಲ್ಲ, ಆದರೆ ರಾಜ್ಯದಲ್ಲಿ ಶಾಂತಿ ಕಾಪಾಡಲು ಟಿಪ್ಪು ಜಯಂತಿ ಕೈ ಬಿಡಿ. ಮತ ಮತ ರಾಜಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆ. ಹಿಂದೆಯೂ ಹಾಳಾಗಿದ್ದಾರೆ, ಕುಮಾರಸ್ವಾಮಿ ಅವರೂ ಹಾಗೇ ಆಗುತ್ತಾರೆ ಎಂದು ಭವಿಷ್ಯ ನುಡಿದರು.
ನಾವು ಹೇಳಲು ಆಗುತ್ತಾ?
ಇದೇ ವೇಳೆ ಸಮ್ಮಿಶ್ರ ಸರಕಾರ ಶೀಘ್ರ ಪತನವಾಗಲಿದೆ ಎಂಬ ಸ್ವಪಕ್ಷ ನಾಯಕರ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಸಿಎಂ ಕುಮಾರಸ್ವಾಮಿ ಅವರು ಅನೇಕ ವೇದಿಕೆಯಲ್ಲಿ ನಾನು ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ಅವರೇ ಹಾಗೆ ಹೇಳುತ್ತಿರುವಾಗ ವಿಪಕ್ಷವಾದ ನಾವು ಈ ಸರ್ಕಾರ ಐದು ವರ್ಷ ಇರುತ್ತೆ ಎಂದು ಹೇಳಲು ಆಗುತ್ತಾ ಎಂದು ಪ್ರಶ್ನಿಸಿದರು.
ಸಿಎಂ ಅವರ ಹೇಳಿಕೆ ಕಾರಣಕ್ಕೆ ನಮ್ಮ ನಾಯಕರು ಹಾಗೆ ಹೇಳಿರಬಹುದು. ರಾಜ್ಯದಲ್ಲಿ ಯಾವುದೇ ವಿಚಾರದಲ್ಲೂ ಸಿಎಂಗೆ ಬೆಲೆಯೇ ಇಲ್ಲದಂತಾಗಿದೆ. ರೈತರಿಗೆ ಸಾಲಮನ್ನಾ ಮಾಡಿದ್ದೇವೆ ಅಂತಾರೆ. ಸಾಲ ಪಡೆದಿದ್ದ ರೈತರಿಗೆ ಸಮನ್ಸ್ ಬರುತ್ತಿದೆ. ಆಡಳಿತ ವ್ಯವಸ್ಥೆ ಸಂಪೂರ್ಣ ಸ್ಥಗಿತವಾಗಿದೆ. ಸ್ವಾತಂತ್ರ್ಯ ನಂತರ ಇಷ್ಟು ಕಳಪೆ ಸಿಎಂ ನಾನು ನೋಡಿರಲಿಲ್ಲ ಎಂದು ಕಿಡಿಕಾರಿದರು.
ಎಲ್ಲಾ ಚುನಾವಣೆಗಳಲ್ಲಿ ಜನ ಒಂದೇ ರೀತಿ ಇರುವುದಿಲ್ಲ. ಅದಕ್ಕೇ ಉಭಯ ಪಕ್ಷಗಳ ನಾಯಕರು ಬೀಗುತ್ತಿದ್ದಾರೆ. ಇದು ಶಾಶ್ವತ ಅಲ್ಲ ಹಿಂದೆ ಹುಚ್ಚು ನಾಯಿಯಂತೆ ಕಿತ್ತಾಡುತ್ತಿದ್ದವರು ಇಂದು ಅಧಿಕಾರಕ್ಕಾಗಿ ಒಂದಾಗಿದ್ದಾರೆ. ಕಾಂಗ್ರೆಸ್ ಕುತಂತ್ರದಿಂದ ರಾಮನಗರದಲ್ಲಿ ನಮ್ಮ ಅಭ್ಯರ್ಥಿ ಪಕ್ಷ ಬಿಟ್ಟರು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ 24 ಸ್ಥಾನಗಳಲ್ಲಿ ಗೆಲ್ಲಲಿದೆ. ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಜನಾರ್ದನ ರೆಡ್ಡಿ ಬಂಧನ ಭೀತಿ ವಿಚಾರ ಪ್ರತಿಕ್ರಿಯೆ ನೀಡಿ ಇದು ಅವರ ವೈಯಕ್ತಿಕ ಅಷ್ಟೇ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv