ಹಾಸನ/ಶಿವಮೊಗ್ಗ: ಜೆಡಿಎಸ್ ಒಂದೇ ಕುಟುಂಬದ ಪಕ್ಷ, ಮಧ್ಯದಲ್ಲಿ ಒಂದು ಬೇರೆ ಮುಖ ಇರಲಿ ಎಂದು ಸಿ.ಎಂ ಇಬ್ರಾಹಿಂ ಅವರನ್ನು ಪಕ್ಷದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (K.S Eshwarappa) ಲೇವಡಿ ಮಾಡಿದ್ದಾರೆ.
ಹಾಸನದ ಹಳ್ಳಿ ಮೈಸೂರಿನಲ್ಲಿ (Halli Mysore) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ (JDS) ಮುಖಂಡರು ನಮ್ಮದು ವಂಶ ಪಾರಂಪರಿಕ ಪಕ್ಷವೆಂದು ಟೀಕೆ ಮಾಡುತ್ತಾರೆ ಎಂದು ಹೇಳಿಕೊಳ್ಳುತ್ತಾರೆ. ಆ ಪಕ್ಷಕ್ಕೆ ಮತ್ತೆ ಏನೆಂದು ಕರೆಯಬೇಕು ಎಂದು ಕುಮಾರಸ್ವಾಮಿಯವರು (H.D kumarswamy) ಹೇಳಬೇಕು. ಇದರ ನಡುವೆ ನಮ್ಮ ಸಿಸ್ಟರ್ ಭವಾನಿ ರೇವಣ್ಣ ಟಿಕೆಟ್ಗಾಗಿ ಹೋರಾಟ ಮಾಡಿದ್ದರು. ಮತದಾರರು ಇಂತಹ ಪಕ್ಷವನ್ನು ಬೆಂಬಲಿಸಬೇಕಾ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ರಾಜ್ಯಕ್ಕೆ ಇಂದು ಮೋದಿ ಎಂಟ್ರಿ – ಬೀದರ್, ವಿಜಯಪುರ, ಬೆಳಗಾವಿಯಲ್ಲಿ ಕ್ಯಾಂಪೇನ್
ಕನಕದಾಸ ಜಯಂತಿ ಘೋಷಣೆ ಹಾಗೂ ಕಾಗಿನೆಲೆ ಪ್ರತಿಷ್ಠಾನ ಮಾಡಿದ್ದು ಯಡಿಯೂರಪ್ಪನವರು. ಇದು ಕುರುಬರ ವೋಟಿಗಾಗಿ ಅಲ್ಲ. ಕನಕದಾಸರ ವಿಚಾರಧಾರೆ ಎಲ್ಲರಿಗೂ ತಲುಪಬೇಕು ಎಂದು ಈ ಅಭಿವೃದ್ಧಿ ಮಾಡಿದ್ದಾರೆ. ಇದೇ ರೀತಿ ಎಲ್ಲಾ ಸಮಾಜಗಳಿಗೂ ಜಾಗೃತಿ ಮೂಡಿಸುವ ಕೆಲಸವನ್ನು ಬಿಜೆಪಿ ಮಾಡಿದೆ. ಆದರೆ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸಮಾಜದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಎಐಸಿಸಿ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡ ಮಲ್ಲಿಕಾರ್ಜುನ ಖರ್ಗೆಯವರು (Mallikarjun Kharge) ಇನ್ನೇನಾದರೂ ಸ್ಥಾನ ಪಡೆಯಲು ನಾಯಕರ ತೃಪ್ತಿಗಾಗಿ ನರೇಂದ್ರ ಮೋದಿಯವರನ್ನು (Narendra Modi) ವಿಷ ಸರ್ಪಕ್ಕೆ ಹೋಲಿಸುತ್ತಿದ್ದಾರೆ. ನಿಮ್ಮ ಬಾಯಲ್ಲಿ ಇಂತಹ ಮಾತುಗಳು ಬಂದ ಮೇಲೆ ನೀವು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದು ಒಳ್ಳೆಯದು ಎಂದು ಗುಡುಗಿದ್ದಾರೆ.
1989ರಲ್ಲಿ ವಿಧಾನಸಭೆಗೆ ಬಂದಾಗಿನಿಂದ ಇಲ್ಲಿಯವರೆಗೂ ರಾಮಸ್ವಾಮಿಯವರನ್ನು ನೋಡುತ್ತಾ ಬಂದಿದ್ದೇನೆ. ಅವರು ಮಾತನಾಡುವಾಗ ಸರಿಯಾದ ವ್ಯಕ್ತಿ ಸರಿಯಾದ ಪಕ್ಷದಲ್ಲಿ ಇಲ್ಲ ಎನಿಸುತ್ತಿತ್ತು. ಈಗ ಅವರು ಬಿಜೆಪಿಗೆ ಬಂದಿರುವುದು ಭೀಮ ಬಲ ಬಂದಂತಾಗಿದೆ. ಮೊದಲ ಬಾರಿ ವಿಧಾನಸಭೆಗೆ ಆಯ್ಕೆಯಾದ ವೇಳೆ ನಾಲ್ಕೇ ಜನ ಎಂಎಲ್ಎಗಳು ಇಡೀ ದೇಶದಲ್ಲಿ ರಾಮಮಂದಿರ ಆಗಬೇಕು ಎಂದು ದ್ವನಿ ಎತ್ತಿದ್ದೆವು ಎಂದಿದ್ದಾರೆ. ಈ ವೇಳೆ ಶಿಳ್ಳೆ ಹೊಡೆದ ರಾಮಸ್ವಾಮಿ ಬೆಂಬಲಿಗರ ವಿರುದ್ಧ ಈಶ್ವರಪ್ಪ ಗರಂ ಆದರು. ಇದನ್ನೂ ಓದಿ: `ಮೋದಿ ವಿಷ ಸರ್ಪ, ಸೋನಿಯಾ ವಿಷಕನ್ಯೆ’ ಹೇಳಿಕೆ – ಖರ್ಗೆ, ಯತ್ನಾಳ್ ವಿರುದ್ಧ ದೂರು