ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಶಾಸಕನ ಬೆಂಬಲಿಗರು 8 ತಿಂಗಳ ಗರ್ಭಿಣಿಗೆ ಒದ್ದು ಆಕೆಯ ಮೇಲೆ ಹಲ್ಲೆ ನಡೆಸಿದ ಘಟನೆ ಕೋಲ್ಕತ್ತಾದ ನರ್ಕೇಲ್ದಂಗ್ ಪ್ರದೇಶದಲ್ಲಿ ನಡೆದಿದೆ.
ಜಮೀನು ವಿಷಯಕ್ಕೆ ಸಂಬಂಧಿಸಿ ದೀಪಕ್ ಹಾಗೂ ಆತನ ತಂದೆ ಶಿವಶಂಕರ್ ದಾಸ್ನ್ನು ಭೇಟಿಯಾಗುವಂತೆ ಶಾಸಕ ಪರೇಶ್ ಪಾಲ್ ತಿಳಿಸಿದ್ದರು. ಅದಕ್ಕೆ ದೀಪಕ್ ನಿರಾಕರಿಸಿದಕ್ಕೆ ಶಾಸಕರ ಬೆಂಬಲಿಗರು ಅವರನ್ನು ಥಳಿಸಿದ್ದರು. ಘಟನೆಗೆ ಸಂಬಂಧಿಸಿ ಪೊಲೀಸರಿಗೆ ದೂರು ನೀಡಲು ಹೋದಾಗ ದೂರು ದಾಖಲಿಸಿಕೊಳ್ಳುವ ಬದಲು ತಂದೆ ಹಾಗೂ ಮಗನನ್ನೆ ಬಂಧಿಸಿದ್ದರು.
ಇದಾದ ಬಳಿಕ ದೀಪಕ್ ಹಾಗೂ ಆತನ ತಂದೆಗೆ ಜಮೀನು ದೊರೆತು ಹೊರಬಂದರು. ನಂತರ ಮನೆಗೆ ಹಿಂದಿರುಗಿದಾಗ ಮನೆಯನ್ನು ಶಾಸಕರ ಬೆಂಬಲಿಗರು ದರೋಡೆ ಮಾಡಿ, ತನ್ನ 8 ತಿಂಗಳ ಗರ್ಭಿಣಿ ಪತ್ನಿಯ ಹೊಟ್ಟೆಗೆ ಒದ್ದು, ಮಕ್ಕಳನ್ನು ಥಳಿಸಿ ಹೋಗಿದ್ದಾರೆ ಎಂದು ದೀಪಕ್ ಆರೋಪಿಸಿದ್ದಾರೆ. ಹಲ್ಲೆಗೊಳಗಾದ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಶಿಕ್ಷಕರ ನೇಮಕಾತಿ ವಿಳಂಬ – ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್
ಘಟನೆಗೆ ಸಂಬಂಧಿಸಿದಂತೆ ಶಾಸಕ ಪರೇಶ್ ಪಾಲ್ ಹಾಗೂ ಕೌನ್ಸಿಲರ್ ಸ್ವಪನ್ ಸಮದ್ದಾ ಅವರು ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ನನಗೆ ಯಾವುದೇ ಶಿವಶಂಕರ್ ದಾಸ್ ಪರಿಚಯವಿಲ್ಲ ಎಂದು ಹೇಳಿದರು. ಘಟನೆಗೆ ಸಂಬಂಧಿಸಿ ಶಾಸಕರ ಬೆಂಬಲಿಗರ ಮೇಲೆ ಪ್ರಕರಣ ದಾಖಲಾಗಿದ್ದು, 7 ಜನರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ದೇಶದಲ್ಲೀಗ ಶಿಕ್ಷಣ ತುಂಬಾ ದುಬಾರಿ – ಇಟಿ ವರದಿ