ಕೋಲ್ಕತ್ತಾ: ಸುಲಿಗೆ, ಹಣ ಅಕ್ರಮ ವರ್ಗಾವಣೆ ಹಾಗೂ ಭೂಕಬಳಿಕೆ ಆರೋಪಗಳನ್ನು ಎದುರಿಸುತ್ತಿರುವ ಹೈ ಪ್ರೊಫೈಲ್ ಸೋನಾ ಪಪ್ಪು ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಗುರುವಾರ (ಮೇ 14) ಕೋಲ್ಕತ್ತಾ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಶಾಂತನು ಸಿನ್ಹಾ ಬಿಸ್ವಾಸ್ ಅವರನ್ನ ಬಂಧಿಸಿದೆ.
ತನಿಖೆ ಸಮಯದಲ್ಲಿ ಹಲವು ಬಾರಿ ಸಮನ್ಸ್ ಜಾರಿಗೊಳಿಸಿದ್ದರೂ ಇಡಿ ಎದುರು ವಿಚಾರಣೆಗೆ ಹಾಜರಾಗದ ಹಿನ್ನೆಲೆ ಸಂತನು ಸಿನ್ಹಾ ಅವರನ್ನ ಇಡಿ ಬಂಧಿಸಿದೆ. ಬಂಧನಕ್ಕೂ ಮುನ್ನ ಸಂತನು ವಿರುದ್ಧ ಲುಕ್ಔಟ್ ನೋಟಿಸ್ ಕೂಡ ಜಾರಿಗೊಳಿಸಲಾಗಿತ್ತು. ಒಟ್ಟಿನಲ್ಲಿ ಹೈ ಪ್ರೊಫೈಲ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ನಡೆಸುತ್ತಿರುವ ತನಿಖೆಯಲ್ಲಿ ಈ ಬಂಧನವು ಮಹತ್ವದ ಬೆಳವಣಿಗೆಯಾಗಿದೆ.
ಸಮನ್ಸ್ ಕೊಟ್ಟಿದ್ದರೂ ಡೋಂಟ್ ಕೇರ್
ಕಳೆದ ಏಪ್ರಿಲ್ 28 ರಂದು ಅಂದ್ರೆ ಬಂಗಾಳ 2ನೇ ಹಂತದ ವಿಧಾನಸಭಾ ಚುನಾವಣೆಗೆ ಒಂದು ದಿನ ಮೊದಲು ಸೋನಾ ಪಪ್ಪು ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಪಿ ಸಂತನು ಅವರಿಗೆ ಇಡಿ ಸಮನ್ಸ್ ನೀಡಿತ್ತು. ಕೋಲ್ಕತ್ತಾದ ಸಿಜಿಒ ಕಾಂಪ್ಲೆಕ್ಸ್ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿವಂತೆ ಸಮನ್ಸ್ ನೀಡಿತ್ತು. ಆದ್ರೆ, ಸಂತನು ಗೈರಾಗಿದ್ದರು. ಆ ಬಳಿಕ ಬಿಸ್ವಾಸ್ ದೇಶಬಿಟ್ಟು ಹೋಗಬಹುದು ಎಂಬ ಸಂಶಯದಿಂದ ಇಡಿ ನ್ಯಾಯಾಲಯವನ್ನು ಸಂಪರ್ಕಿಸಿ ಲುಕ್ಔಟ್ ನೋಟಿಸ್ ಕೂಡ ಜಾರಿಗೊಳಿಸಿತ್ತು. ಇದರ ಹೊರತಾಗಿ ಪದೇ ಪದೇ ಸಮನ್ಸ್ ಕಳುಹಿಸುತ್ತಿದ್ದರೂ ವಿಚಾರಣೆಗೆ ಹಾಜರಾಗಲು ಕಡೆಗಣಿಸಿದ್ದರಿಂದ ಸಂತನು ಅವರನ್ನ ಬಧಿಸಲಾಗಿದೆ.
ಏನಿದು ಸೋನಾ ಪಪ್ಪು ಕೇಸ್?
ಕೋಲ್ಕತ್ತಾದ ಬ್ಯಾಲಿಗಂಜ್ ನಿವಾಸಿಯಾಗಿರುವ ಸೋನಾ ಪಪ್ಪು, ಭೂಕಬಳಿಕೆ, ಸುಲಿಗೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಅಪರಾಧಗಳು ಸೇರಿದಂತೆ ಹಲವು ಆರೋಪಗಳನ್ನ ಎದುರಿಸುತ್ತಿದ್ದಾನೆ. ಈ ದೂರುಗಳ ಆಧಾರದ ಮೇಲೆ, ಇಡಿ ತನಿಖೆ ಆರಂಭಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಹಾಲಾದ ಉದ್ಯಮಿ ಜಾಯ್ ಕಾಮದಾರ್ ಅವರನ್ನ ಮೊದಲೇ ಬಂಧಿಸಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು, ಕೋಲ್ಕತ್ತಾದ ಫರ್ನ್ ರಸ್ತೆಯಲ್ಲಿರುವ ಸಿನ್ಹಾ ಬಿಸ್ವಾಸ್ ಅವರ ನಿವಾಸದ ಮೇಲೆ ಇಡಿ ದಾಳಿ ನಡೆಸಿತು. ಶೋಧ ಕಾರ್ಯಗಳು ಬೆಳಗಿನ ಜಾವ ಪ್ರಾರಂಭವಾಗಿ ಸುಮಾರು ಮಧ್ಯಾಹ್ನ 2 ಗಂಟೆಯವರೆಗೆ ನಡೆದಿತ್ತು. ಮರುದಿನ, ಅದೇ ಪ್ರಕರಣದಲ್ಲಿ ಸಿನ್ಹಾ ಬಿಸ್ವಾಸ್ ಮತ್ತು ಅವರ ಇಬ್ಬರು ಪುತ್ರರಾದ ಸಯಂತನ್ ಮತ್ತು ಮನೀಶ್ ಅವರನ್ನು ವಿಚಾರಣೆಗೆ ಒಳಪಡಿಸಲು ಸಂಸ್ಥೆಯು ಸಮನ್ಸ್ ನೀಡಿತು. ಅವರಲ್ಲಿ ಯಾರೂ ಇಡಿ ಮುಂದೆ ಹಾಜರಾಗಲಿಲ್ಲ.

