– ರಾಷ್ಟ್ರೀಯ ಪಕ್ಷದ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಬೇಕು
ಮಡಿಕೇರಿ: ದೇಶಕ್ಕಾಗಿ, ಸ್ವತಂತ್ರಕ್ಕಾಗಿ ಇದುವರೆಗೆ ಆರ್ಎಸ್ಎಸ್ನ ಯಾರು ಸತ್ತಿಲ್ಲ. ಬಿಜೆಪಿಯವರೆ ತಾಲೀಬಾನಿಗಳು ಎಂದಿರುವ ಮಾಜಿ ಸಿಎಂ ಸಿದ್ದರಾಮಯ್ಯ ಟಿಪ್ಪುವಿನ ವಂಶಸ್ಥರಾಗಿರಬೇಕು. ಹೀಗಾಗಿ ಅವರು ಬಿಜೆಪಿಯವರು ತಾಲೀಬಾನಿಗಳು ಎಂದಿದ್ದಾರೆ ಎಂದು ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವಾರು ದೇಶಭಕ್ತರನ್ನು ಬೆಳೆಸಿದೆ. ಇಂದಿಗೂ ಜನರಲ್ಲಿ ದೇಶಭಕ್ತಿ ಮೂಡಿಸುತ್ತಿದೆ. ಆದರೆ ಟಿಪ್ಪುಸುಲ್ತಾನ್ ರಾಜ್ಯದಲ್ಲಿ ಸಾವಿರಾರು ಜನರನ್ನು ಬಲವಂತದಿಂದ ಮತಾಂತರ ಮಾಡಿದ. ನೂರಾರು ಹಿಂದೂ ದೇವಾಲಯಗಳನ್ನು ನಾಶ ಮಾಡಿದ. ಅಂತವನ ಜಯಂತಿಯನ್ನು ಆಚರಣೆಗೆ ತಂದಿದ್ದವರು ಸಿದ್ದರಾಮಯ್ಯ ಎಂದು ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯನವರೇ ಒಬ್ಬ ದೊಡ್ಡ ಭಯೋತ್ಪಾದಕ: ಕಟೀಲ್
ಹಿಂದೂ ಮುಸ್ಲಿಂ ಎಂಬ ಬೇಧ ಭಾವಗಳನ್ನು ಸೃಷ್ಟಿಸಿ ಸಮಾಜದಲ್ಲಿ ಒಡಕು ಮೂಡಿಸುವ ಸಿದ್ದರಾಮಯ್ಯನವರದು ತಾಲೀಬಾನ್ ಸಂಸ್ಕೃತಿ ಅಲ್ಲವೆ? ಎಂದು ಪ್ರಶ್ನಿಸಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯನವರು ಇಂತಹ ಮಾತನಾಡುತ್ತಾರೆ ಎಂಬ ನಿರೀಕ್ಷೆ ಇರಲಿಲ್ಲ. ಬಿಜೆಪಿ ರಾಷ್ಟ್ರೀಯ ಪಕ್ಷ, ರಾಷ್ಟ್ರೀಯ ಪಕ್ಷದ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಬೇಕಾಗಿತ್ತು ಎಂದು ಬೋಪಯ್ಯ ಎಚ್ಚರಿಕೆಯನ್ನು ನೀಡಿದ್ದಾರೆ.