ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಆಳ್ವಾಸ್ ಹೈಸ್ಕೂಲಿನ ವಿದ್ಯಾರ್ಥಿನಿ, ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಕಾವ್ಯಾ ಪೂಜಾರಿ ನಿಗೂಢ ಸಾವಿನ ಮರಣೋತ್ತರ ಪರೀಕ್ಷೆಯ ವರದಿ ಪೊಲೀಸರ ಕೈ ಸೇರಿದೆ.
ಮರಣೋತ್ತರ ಪರೀಕ್ಷೆಯ ವರದಿಯಂತೆ ಪ್ರಕರಣದ ತನಿಖೆ ನಡೆಸುತ್ತಿರುವ ಪಣಂಬೂರು ಎಸಿಪಿ ರಾಜೇಂದ್ರ ಅವರು ಪರಿಶೀಲಿಸಿದ್ದಾರೆ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿದ್ದರೂ ವಿಧಿ ವಿಜ್ಞಾನ ಇಲಾಖೆಯ ವರದಿ ಹಾಗೂ ಆ ವರದಿಯಿಂದ ವೈದ್ಯರು ನೀಡುವ ವರದಿಯಂತೆ ಪ್ರಕರಣದ ಅಂತಿಮ ತೀರ್ಮಾನಕ್ಕೆ ಬರಲಾಗುತ್ತದೆ ಎಂದು ಎಸಿಪಿ ತಿಳಿಸಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿನಿ ಕಾವ್ಯ ಪೂಜಾರಿ ಕೇಸ್: ಆಳ್ವಾಸ್ ಕಾಲೇಜು ಮುಖ್ಯಸ್ಥ ಮೋಹನ್ ಆಳ್ವ ಹೇಳಿದ್ದೇನು?
ಈ ಎಲ್ಲಾ ವರದಿಗಳು ಸರಿಯಾಗಿ ಆಗಬೇಕಿರುವುದರಿಂದ ಇನ್ನೂ 15 ದಿನಗಳ ಕಾಲ ಆಗುವ ಸಾಧ್ಯತೆ ಇದೆ. ಇದೊಂದು ಗಂಭೀರ ಪ್ರಕರಣವಾಗಿರುವುದರಿಂದ ಪೊಲೀಸರು ಕೂಡ ಎಲ್ಲಾ ರೀತಿಯ ತನಿಖೆಗಳನ್ನೂ ಮಾಡುತ್ತಿದ್ದಾರೆ. ಈಗಾಗಲೇ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಿಬ್ಬಂದಿ, ದೈಹಿಕ ಶಿಕ್ಷಕ ಪ್ರವೀಣ್ ಕುಮಾರ್, ಕಾವ್ಯಾಳ ಸಹಪಾಠಿಗಳು, ಹಾಸ್ಟೆಲ್ ವಾರ್ಡನ್ರನ್ನು ವಿಚಾರಣೆ ನಡೆಸಿದ್ದ ಎಸಿಪಿ ತಂಡ ಕಾವ್ಯಾಳ ಹೆತ್ತವರಿಂದಲೂ ಮಾಹಿತಿ ಪಡೆದಿದ್ದಾರೆ.
ಕಾವ್ಯಾಳ ಸಾವಿನ ರಹಸ್ಯ ನಿಗೂಢವಾಗಿದ್ದು, ಈ ಕುರಿತು ಸುದ್ದಿಯಾಗಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿರುವುದರಿಂದ ಪೊಲೀಸರೂ ಎಚ್ಚರಿಕೆಯಿಂದ ತನಿಖೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಸೂಕ್ತ ತನಿಖೆಗೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆಯ ಕಾವು ಹೆಚ್ಚುತ್ತಲೇ ಇದೆ.
ಇದನ್ನೂ ಓದಿ: ಬಿಗ್ ಬುಲೆಟಿನ್ ನಲ್ಲಿ ಕಾವ್ಯ ಶ್ರೀ ಪ್ರಕರಣದ ಬಿಗ್ ಚರ್ಚೆ – ತನಿಖೆಗೆ ಸಹಕರಿಸುವೆ ಎಂದ ಮೋಹನ್ ಆಳ್ವ