ಭೋಪಾಲ್: ಶಾಲೆಯ ವಾರ್ಷಿಕೋತ್ಸವದಲ್ಲಿ ಪದ್ಮಾವತ್ ಚಿತ್ರದ ಗೂಮರ್ ಹಾಡಿಗೆ ನೃತ್ಯ ಮಾಡಿದ್ದಕ್ಕೆ ಶ್ರೀ ರಜ್ಪೂತ್ ಕರ್ಣಿ ಸೇನಾ ಕಾರ್ಯಕರ್ತರು ಶಾಲಾ ಆಸ್ತಿಯನ್ನು ಧ್ವಂಸ ಮಾಡಿದ ಘಟನೆ ಮಧ್ಯ ಪ್ರದೇಶದ ರತ್ಲಂನಲ್ಲಿ ನಡೆದಿದೆ.
ಸೆಂಟ್ ಪೌಲ್ ಕಾನ್ವೆಂಟ್ ನಲ್ಲಿ ಈ ಘಟನೆ ನಡೆದಿದ್ದು, 1 ರಿಂದ 5ನೇ ತರಗತಿಯ ಮಕ್ಕಳು ಶಾಲಾ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿದ್ದರು. ಕಾರ್ಯಕ್ರಮ ನಡೆಯುವಾಗ ಕರ್ಣಿ ಸೇನಾ ಕಾರ್ಯಕರ್ತರು ಪ್ಲಾಸ್ಟಿಕ್ ಚೇರ್ ಮುರಿದಿದ್ದಾರೆ ಅಷ್ಟೇ ಅಲ್ಲದೇ ಸ್ಪೀಕರ್ ಒಡೆದು ಹಾಕಿದ್ದಾರೆ. ಈ ಘಟನೆಯಲ್ಲಿ ಓರ್ವ ವಿದ್ಯಾರ್ಥಿಗೆ ಗಾಯವಾಗಿದೆ.
ಶಾಲೆಯ ಆಡಳಿತ ಮಂಡಳಿ ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ ಹಾಗೂ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಸದ್ಯ ಪದ್ಮಾವತಿ ಚಿತ್ರ ಪದ್ಮಾವತ್ ಆಗಿ ಬದಲಾಗಿದ್ದು, ಯು/ಎ ಸರ್ಟಿಫಿಕೆಟ್ ದೊರೆತಿದೆ. ಈ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ರಾಣಿ ಪದ್ಮಾವತ್ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಚಿತ್ರದಲ್ಲಿ ಇಬ್ಬರೂ ನಾಯಕರಿದ್ದು, ಶಾಹಿದ್ ಕಪೂರ್ ರಾಣಾ ರತನ್ ಸಿಂಗ್ ಆಗಿ ಕಾಣಿಸಿಕೊಂಡಿದ್ದಾರೆ. ಮತ್ತೊಬ್ಬ ನಟ ರಣ್ವೀರ್ ಸಿಂಗ್ ಅಲ್ಲಾವುದ್ದೀನ್ ಖಿಲ್ಜಿ ಆಗಿ ಬಣ್ಣ ಹಚ್ಚಿದ್ದಾರೆ. ಪದ್ಮಾವತ್ ಚಿತ್ರ ಇದೇ ತಿಂಗಳು 25 ರಂದು ಬಿಡುಗಡೆಯಾಗಲಿದೆ.