– ಮಂಗಳವಾರ ಮಧ್ಯಾಹ್ನದೊಳಗೆ ಬೇಡಿಕೆ ಈಡೇರಿಕೆಗೆ ಪಟ್ಟು
ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ಸಂಘಟನೆಗಳು ಕರೆ ನೀಡಿರುವ ಬಸ್ ಬಂದ್ (Bus Strike) ಆಗುವುದು ನಿಶ್ಚಿತವಾಗಿದೆ. ಇಂದು ಬೆಂಗಳೂರಿನ (Bengaluru) ಬನ್ನೇರುಘಟ್ಟದಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳು ನಡೆಸಿದ ಸಂಧಾನ ಸಭೆ ವಿಫಲವಾಗಿದೆ.
ಅಧಿಕಾರಿಗಳ ಮನವೊಲಿಕೆಗೆ ಸಾರಿಗೆ ಸಂಘಟನೆಗಳು ಸುತಾರಾಂ ಒಪ್ಪಿಗೆ ನೀಡಿಲ್ಲ. ಮತ್ತೆ ಮೇ 25ಕ್ಕೆ ಸಭೆಗೆ ಬರುವಂತೆ ಅಧಿಕಾರಿಗಳು ಹೇಳಿದ್ದರೂ ಮುಖಂಡರು ಒಪ್ಪಿಗೆ ನೀಡಲಿಲ್ಲ. ನಾಳೆ ಮಧ್ಯಾಹ್ನದ ಒಳಗಾಗಿ ಸಭೆ ಕರೆದು ಬೇಡಿಕೆ ಈಡೇರಿಕೆ ಸಂಬಂಧ ಮಾತನಾಡುವಂತೆ ಆಗ್ರಹಿಸಿದರು. ಇದಕ್ಕೆ ಅಧಿಕಾರಿಗಳು ಸರ್ಕಾರ ಸದ್ಯದ ಪರಿಸ್ಥಿತಿ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು.
ಪಟ್ಟು ಸಡಿಲಿಸದ ಸಾರಿಗೆ ನೌಕರ ಸಂಘಟನೆ ಮುಖಂಡರು ನಾಳೆ ಮಧ್ಯರಾತ್ರಿಯಿಂದಲೇ ಬಸ್ ಸಂಚಾರ ಸ್ಥಗಿತಕ್ಕೆ ತೀರ್ಮಾನಿಸಿದ್ದಾರೆ. ಬಿಎಂಟಿಸಿ, ಕೆಎಸ್ಆರ್ಟಿಸಿ ಸೇರಿದಂತೆ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಬಸ್ ಬಂದ್ನಿಂದ ಸಾರ್ವಜನಿಕರಿಗೆ ಭಾರೀ ತೊಂದರೆಯಾಗುವ ಆತಂಕ ಎದುರಾಗಿದೆ. ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳತ್ತೇವೆ ಎಂದು ಪ್ರಯಾಣಿಕರಿಗೆ ಅಭಯ ನೀಡಿದ್ದಾರೆ. ಇತ್ತ ಎಸ್ಸಿ, ಎಸ್ಟಿ ನೌಕರರ ಸಂಘ ಮುಷ್ಕರದಿಂದ ಹೊರ ಬಂದಿದ್ದು, ಮುಷ್ಕರದಲ್ಲಿ ಭಾಗಿಯಾಗುವುದಿಲ್ಲ. ಇಲಾಖೆಯ ಆದೇಶದಂತೆ ನಡೆದುಕೊಳ್ತೇವೆ ಎಂದು ಹೇಳಿದೆ.
ಬೇಡಿಕೆ ಏನು?
> ಶೇ.25% ವೇತನ ಹೆಚ್ಚಳ ಮಾಡಬೇಕು ಎಂಬ ಬೇಡಿಕೆಗೆ ಸರ್ಕಾರ ಕೊಟ್ಟಿದ್ದು 12.5% ಮಾತ್ರ
> 2024ರ ಜನವರಿಯಿಂದ ಶೇ.25ರಷ್ಟು ವೇತನ ನೀಡಬೇಕು. ಬಾಕಿ ವೇತನ ಪೂರ್ಣ ಪ್ರಮಾಣದಲ್ಲಿ ಪಾವತಿಯಾಗಬೇಕು
> 26 ತಿಂಗಳ ಬಾಕಿ ವೇತನ ಒಂದೇ ಕಂತಿನಲ್ಲಿ ಕೊಡಬೇಕು,ಭತ್ಯೆ ಹೆಚ್ಚಳ ಮಾಡಬೇಕು
> ಕೋವಿಡ್ನಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಕ್ಷಣ ಪರಿಹಾರ ನೀಡಿ
> ಆಡಳಿತಾತ್ಮಕ ಸಮಸ್ಯೆಗಳನ್ನು ಬಗೆಹರಿಸಲು 1 ತಿಂಗಳು ಗಡವು
> 26 ತಿಂಗಳ ಬಾಕಿ ಹಣ 1,272 ಕೋಟಿ ರಿಲೀಸ್ ಮಾಡಬೇಕು
ಎಸ್ಮಾ ಎಚ್ಚರಿಕೆ
ಬುಧವಾರ ಮುಷ್ಕರಕ್ಕೆ ಕರೆ ನೀಡಿರುವ ಸಾರಿಗೆ ನೌಕರರಿಗೆ ಕೆಎಸ್ಆರ್ಟಿಸಿ (KSRTC) ಖಡಕ್ ಎಚ್ಚರಿಕೆ ರವಾನಿಸಿದೆ. ಸಾರಿಗೆ ನೌಕರರಿಗೆ ಕೆಎಸ್ಆರ್ಟಿಸಿ ಎಂಡಿ ಅಕ್ರಂ ಪಾಷಾ ಎಸ್ಮಾ (ESMA) ಜಾರಿ ಮಾಡಿ ಮುಷ್ಕರದಲ್ಲಿ ಭಾಗಿಯಾಗದಂತೆ ಆದೇಶಿಸಿದ್ದಾರೆ. ಸಾರಿಗೆ ನೌಕರರು ಮುಷ್ಕರ ಮಾಡುವಂತಿಲ್ಲ. ಮುಷ್ಕರಕ್ಕೆ ಪ್ರಚೋದನೆ ನೀಡಿದರೆ ಕ್ರಮ ಕೈಗೊಳ್ಳಲಾಗುತ್ತದೆ. ವಿಶೇಷ ಸೂಚನೆಯಡಿ ನೀಡಿರುವ ನಿರ್ದೇಶನದಂತೆ ಕರ್ತವ್ಯಕ್ಕೆ ಗೈರು ಹಾಜರಾದ ನೌಕರರ ವಿರುದ್ಧ ಶಿಸ್ತುಕ್ರಮವನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದರ ಜೊತೆಗೆ ನೌಕರರು ಮುಷ್ಕರ ನಡೆಸಿದ್ರೆ ಪರ್ಯಾಯ ಮಾರ್ಗ ಕಂಡುಕೊಳ್ಳಲಾಗಿದೆ. 2 ಸಾವಿರ ಟ್ರೈನೀ, 5 ಸಾವಿರ ಡ್ರೈವರ್ ಬಳಕೆ ಮಾಡಿಕೊಂಡು ಖಾಸಗಿ ವಾಹನಗಳನ್ನು ಬಳಸಿ ಸಮಸ್ಯೆಯಾಗದಂತೆ ನಿರ್ವಹಣೆ ಮಾಡುವುದಾಗಿ ಹೇಳಿದ್ದಾರೆ. ಎಸ್ಮಾ ಜಾರಿ ಮಾಡಿದ್ದೇವೆ. ಎಲ್ಲಾ ನೌಕರರಿಗೆ ಭಾಗಿಯಾಗಬೇಡಿ ಅಂತಾ ಮನವಿ ಮಾಡಿದ್ದೇವೆ. ತುಮಕೂರಿನಲ್ಲಿ ನಡೆಯಲಿರುವ ಸಾಧನಾ ಸಮಾವೇಶಕ್ಕೆ ಎರಡು ಸಾವಿರ ಬಸ್ಗಳನ್ನು ನೀಡುತ್ತಿದ್ದೇವೆ ಎಂದು ಅಕ್ರಂ ಪಾಷಾ ಹೇಳಿದ್ದಾರೆ.

