ಬೆಂಗಳೂರು: ವಿಪಕ್ಷಗಳ ತೀವ್ರ ವಿರೋಧದ ಮಧ್ಯೆ ವಿಧಾನ ಪರಿಷತ್ನಲ್ಲಿ(Vidhan Parishad) ಮತಾಂತರ ನಿಷೇಧ ಮಸೂದೆ(Anti Conversion Bill) ಧ್ವನಿ ಮತದ ಮೂಲಕ ಅಂಗೀಕಾರಗೊಂಡಿದ್ದು ಬಿಜೆಪಿ(BJP) ಶಾಸಕರು ಸಂಭ್ರಮಿಸಿದ್ದಾರೆ.
ಈ ಬಿಲ್ ಪಾಸ್ ಆಗುವ ಹಂತದಲ್ಲಿ ಕಾಂಗ್ರೆಸ್ನ(Congress) ಬಿಕೆ ಹರಿಪ್ರಸಾದ್, ಸಲೀಂ ಅಹ್ಮದ್ ಸೇರಿ ಹಲವರು ವಿಧೇಯಕದ ಪ್ರತಿ ಹರಿದೆಸೆದು ಆಕ್ರೋಶ ಹೊರಹಾಕಿದರೆ ಜೆಡಿಎಸ್(JDS) ಸದಸ್ಯರು ಸಭಾತ್ಯಾಗ ಮಾಡಿದರು.
ಇದಕ್ಕೂ ಮುನ್ನ, ಪರಿಷತ್ನಲ್ಲಿ ಸುದೀರ್ಘವಾಗಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ-2022ರ ಮೇಲೆ ಚರ್ಚೆ ನಡೆಯಿತು. ಚರ್ಚೆ ವೇಳೆ ಹಲವು ಬಾರಿ ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಕ್ಸಮರ ನಡೆಯಿತು.
ಬಲವಂತದ ಮತಾಂತರ ನಿಷೇಧ ಮಸೂದೆ ಪರವಾಗಿ ಸಿಎಂ ಬೊಮ್ಮಾಯಿ, ಆರಗ ಜ್ಞಾನೇಂದ್ರ ಸೇರಿ ಹಲವರು ಸಚಿವರು ಬ್ಯಾಟ್ ಬೀಸಿದರು. ಆದರೆ ಎಲ್ಲಿ ಮತಾಂತರ ನಡೆಯುತ್ತಿದೆ? ಇದರ ಅಗತ್ಯವಾದ್ರೂ ಏನು? ಇದು ಸಂವಿಧಾನ ವಿರೋಧಿ ವಿಧೇಯಕ ಎಂದು ಮೇಲ್ಮನೆ ವಿಪಕ್ಷ ನಾಯಕರು ಆಕ್ಷೇಪಿಸಿದ್ರು. ಇದನ್ನೂ ಓದಿ: ಬಿಕೆ ಹರಿಪ್ರಸಾದ್ ಕ್ರಿಶ್ಚಿಯನ್ ಆದ್ರೆ ನಮ್ಮದೇನೂ ತಕರಾರಿಲ್ಲ: ಮಾಧುಸ್ವಾಮಿ
ರಾಜ್ಯದಲ್ಲಿ ಮತಾಂತರ ನಡೆಯುತ್ತಿಲ್ಲ. ಒಂದು ವೇಳೆ ನಡೆಯುತ್ತಿದ್ದರೆ ಮುಸ್ಲಿಮರು, ಕ್ರಿಶ್ಚಿಯನ್ನರ ಸಂಖ್ಯೆ ಹೆಚ್ಚಾಗಬೇಕಿತ್ತು. ಆದರೆ ಅವರ ಸಂಖ್ಯೆ ಕುಸಿಯುತ್ತಿದೆ ಎಂದು ಬಿಕೆ ಹರಿಪ್ರಸಾದ್ ಲೆಕ್ಕ ಹೇಳಿದರು. ಅಲ್ಲದೇ ಈ ವಿಧೇಯಕವನ್ನು ವಿರೋಧಿಸುವ ಭರದಲ್ಲಿ ಬಿಕೆ ಹರಿಪ್ರಸಾದ್ ಬ್ರಿಟೀಷರು, ಮೊಘಲರನ್ನು ಸಮರ್ಥಿಸಿದರು. ಅವರ ಕಾಲದಲ್ಲಿ ಕೂಡ ಮತಾಂತರ ಮಾಡಿರಲಿಲ್ಲ ಎಂದರು. ಇಷ್ಟಪಟ್ಟು ಮತಾಂತರ ಆದರೆ ತಪ್ಪೇನು ಎಂದು ಪ್ರಶ್ನಿಸಿದರು.