ರಾಯಚೂರು: ರಾಜ್ಯದಲ್ಲಿ ಶಿಕ್ಷಣ ಇಲಾಖೆ ಆರ್ಥಿಕ ಸಂಕಷ್ಟವನ್ನ ಎದುರಿಸುತ್ತಿದೆಯಾ ಅನ್ನೋ ಅನುಮಾನಗಳು ಮತ್ತೆ ಮೂಡಿವೆ. ಈ ಹಿಂದೆ ಶಿಕ್ಷಣ ಸಚಿವರು ಸರ್ಕಾರಿ ಶಾಲೆ ಮಕ್ಕಳ ಪೋಷಕರಿಂದ 100 ರೂ. ಪಡೆದು ರಶೀದಿ ಕೊಡಬೇಕು ಅನ್ನೋ ಹೇಳಿಕೆ ಭಾರೀ ವಿವಾದ ಸೃಷ್ಟಿಸಿತ್ತು. ಈಗ ಪೂರ್ವ ಸಿದ್ಧತಾ ಪರೀಕ್ಷೆಗೆ ಶುಲ್ಕ ನಿಗದಿ ಮಾಡಿ, ಹಣ ಸಂಗ್ರಹಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ 2022-23 ನೇ ಸಾಲಿನ ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಯನ್ನ ಫೆಬ್ರವರಿ 23 ರಿಂದ ಮಾರ್ಚ್ 1 ರ ವರೆಗೆ ನಡೆಸಲು ಈಗಾಗಲೇ ವೇಳಾಪಟ್ಟಿಯನ್ನ ಪ್ರಕಟಿಸಿದೆ. ಆದರೆ ವೇಳಾಪಟ್ಟಿಯ ಜೊತೆ ಸುತ್ತೋಲೆಯಲ್ಲಿ ಪರೀಕ್ಷೆ ನಡೆಸಲು ವಿದ್ಯಾರ್ಥಿಗಳಿಂದ ಶುಲ್ಕವನ್ನು ಸಂಗ್ರಹಿಸಿ ಮುಖ್ಯೋಪಾಧ್ಯಾಯರ ಮೂಲಕ ಬಿಇಓ ಬ್ಯಾಂಕ್ ಖಾತೆಗೆ ಪಡೆಯುವಂತೆ ಸೂಚಿಸಿದೆ. ಪ್ರತಿ ವಿದ್ಯಾರ್ಥಿಯಿಂದ ಪ್ರಶ್ನೆ ಪತ್ರಿಕೆಗಾಗಿ 60 ರೂಪಾಯಿ ಶುಲ್ಕವನ್ನು ಈಗಾಗಲೇ ಸಂಗ್ರಹಿಸಲಾಗುತ್ತಿದೆ. ಇದನ್ನೂ ಓದಿ: ಜೆಡಿಎಸ್ ಶಾಸಕ ಶಿವಲಿಂಗೇಗೌಡ 100% ಕಾಂಗ್ರೆಸ್ ಸೇರ್ಪಡೆಯಾಗ್ತಾರೆ: ಸಿದ್ದರಾಮಯ್ಯ
ಉತ್ತರ ಪತ್ರಿಕೆಗೂ ವಿದ್ಯಾರ್ಥಿಗಳು ಹಣ ಖರ್ಚು ಮಾಡಬೇಕಿದೆ. ವಿದ್ಯಾರ್ಥಿಗಳಿಂದ ಶುಲ್ಕ ಸಂಗ್ರಹಿಸುವ ಸರ್ಕಾರ ಕೇವಲ ಪ್ರಶ್ನೆ ಪತ್ರಿಕೆ ಮಾತ್ರ ನೀಡುತ್ತದೆ. ಇದೇ ಬಾರಿಗೆ ಈ ನಿಯಮವನ್ನ ಜಾರಿಗೆ ತಂದಿದ್ದು, ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ವಸೂಲಿ ನಡೆಸಿದೆ. ಪೂರ್ವ ಸಿದ್ಧತಾ ಪರೀಕ್ಷೆಗೆ ಈ ಮೊದಲು ಶುಲ್ಕವನ್ನು ಸರ್ಕಾರ ಪಡೆದಿಲ್ಲ. ಈಗ ಶುಲ್ಕ ಪಡೆಯುತ್ತಿರುವುದು ಸರಿಯಲ್ಲ ಎಂದು ಪೋಷಕರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಇಲಾಖೆ ಸರ್ಕಾರಿ ಶಾಲೆಯಲ್ಲಿ ಓದುವ ಬಡ ಮಕ್ಕಳಿಂದಲೂ ಪರೀಕ್ಷಾ ಶುಲ್ಕ ಪಡೆಯುತ್ತಿರುವುದು ನೋಡಿದರೆ, ಆರ್ಥಿಕ ಸಂಕಷ್ಟ ಎದುರಿಸುತ್ತಿದೆಯಾ ಅನ್ನೋ ಅನುಮಾನ ಮೂಡಿದೆ.
ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಯನ್ನ ಕಠಿಣ ರೀತಿಯಲ್ಲಿ ನಡೆಸಲು ಮುಂದಾಗಿರುವ ಸರ್ಕಾರ, ತನ್ನ ಸಿದ್ಧತೆಗಾಗಿ ಬಡ ವಿದ್ಯಾರ್ಥಿಗಳಿಂದ ಶುಲ್ಕ ವಸೂಲಿ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಅನ್ನೋದು ಪೋಷಕರ ಪ್ರಶ್ನೆ. ವಾರ್ಷಿಕ ಶುಲ್ಕದಲ್ಲಿ ಪರೀಕ್ಷಾ ಶುಲ್ಕ ಕಟ್ಟಿದವರು ಸಹ ಪುನಃ ಶುಲ್ಕ ಕಟ್ಟಬೇಕಾಗಿದೆ. ಸರ್ಕಾರಿ ಶಾಲೆಗಳಲ್ಲೂ ಸಹ ಶಿಕ್ಷಣವನ್ನ ವ್ಯಾಪಾರೀಕರಣ ಮಾಡಲು ಶಿಕ್ಷಣ ಇಲಾಖೆ ಹೊರಟಂತಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 30 ವರ್ಷವಾದ್ರೂ ವಧು ಸಿಕ್ಕಿಲ್ಲ ಅಂತಾ `ಬ್ರಹ್ಮಚಾರಿಗಳ ನಡೆ ಮಾದಪ್ಪನ ಕಡೆ’
ಈ ಮೊದಲು ಪೂರ್ವ ಸಿದ್ಧತಾ ಪರೀಕ್ಷೆಗೆ ಶುಲ್ಕ ಪಡೆಯದ ಶಿಕ್ಷಣ ಇಲಾಖೆ ಈ ಬಾರಿ ಶುಲ್ಕ ಪಡೆಯುತ್ತಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಉತ್ತರ ಪತ್ರಿಕೆಯ ಖರ್ಚನ್ನೂ ವಿದ್ಯಾರ್ಥಿಗಳೇ ಭರಿಸಬೇಕಾಗಿರುವುದರಿಂದ ಶಿಕ್ಷಣ ಇಲಾಖೆ ನಡೆ ಬಗ್ಗೆ ವಿದ್ಯಾರ್ಥಿಗಳ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ಶುಲ್ಕ ಪಡೆಯುವುದನ್ನ ನಿಲ್ಲಿಸಬೇಕು. ಪಡೆದಿರುವ ಶುಲ್ಕವನ್ನು ಮರಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k