ಬೆಂಗಳೂರು: ಜಾಗತಿಕ ಮಾರುಕಟ್ಟೆಯಲ್ಲಿನ ಸನ್ನಿವೇಶ ಹಾಗೂ ರಾಜ್ಯದಲ್ಲಿ ಇಂಧನ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ನಾಗರಿಕ ಹಾಗೂ ಆಹಾರ ಸರಬರಾಜು ಇಲಾಖೆಯು ಪೆಟ್ರೋಲ್ ಮತ್ತು ಡೀಸೆಲ್ ವಿತರಣೆಗೆ ಸಂಬಂಧಿಸಿದಂತೆ ಹೊಸ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಗ್ರಾಹಕರ ಹಿತದೃಷ್ಟಿಯಿಂದ ಹಾಗೂ ಸುರಕ್ಷತೆಯ ಕಾರಣಗಳಿಗಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಇಂಧನ ವಿತರಣಾ ಕೇಂದ್ರಗಳಿಗೆ (Retail Outlets) ಪ್ರಮುಖ ಸೂಚನೆಗಳನ್ನು ನೀಡಲಾಗಿದೆ.
ಇಲಾಖೆಯ ಈ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ನಿಯಮ ಉಲ್ಲಂಘಿಸುವ ಪೆಟ್ರೋಲ್ ಬಂಕ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಚಿನ್ನ ಖರೀದಿಸಬೇಡಿ – ಮೋದಿ ಕರೆಯ ಬೆನ್ನಲ್ಲೇ ಹಳದಿ ಲೋಹದ ಬೆಲೆ ಭಾರೀ ಇಳಿಕೆ!
ಮಾರ್ಗಸೂಚಿಯಲ್ಲಿ ಏನಿದೆ?
ಪೆಟ್ರೋಲಿಯಂ ನಿಯಮಗಳು 2002ರ ಅನ್ವಯ, ಇಂಧನ ಕೇಂದ್ರಗಳು ವಾಹನಗಳ ಟ್ಯಾಂಕ್ಗಳಿಗೆ ಅಥವಾ ಅಧಿಕೃತ ಕಂಟೇನರ್ಗಳಿಗೆ ಮಾತ್ರ ಇಂಧನ ತುಂಬಿಸಬೇಕು. ಇದಕ್ಕೆ ಗರಿಷ್ಠ 200 ಲೀಟರ್ಗಳ ಮಿತಿಯನ್ನು ಹೇರಲಾಗಿದೆ. ಇದನ್ನೂ ಓದಿ: ತೈಲ ಕಂಪನಿಗಳಿಗೆ 1 ಲಕ್ಷ ಕೋಟಿ ನಷ್ಟ – ಶೀಘ್ರವೇ ದರ ಏರಿಕೆ?
ರಿಟೇಲ್ ಔಟ್ಲೆಟ್ಗಳು ದೊಡ್ಡ ಮಟ್ಟದ ಇಂಧನ ಪೂರೈಕೆ (Bulk Operations) ಮಾಡುವಂತಿಲ್ಲ. ಅಂತಹ ವ್ಯವಹಾರಗಳನ್ನು ಕೇವಲ ‘ನೇರ ಮಾರಾಟ ಕಾರ್ಯವಿಧಾನ’ಗಳ (Direct Sales Mechanisms) ಮೂಲಕವೇ ನಡೆಸಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿ ಬಲ್ಕ್ ಮಾರಾಟ ಮಾಡಿದರೆ ಪರವಾನಗಿ ರದ್ದತಿಯಂತಹ ಗಂಭೀರ ಕ್ರಮ ಎದುರಿಸಬೇಕಾಗುತ್ತದೆ.
ಕೃಷಿ ಚಟುವಟಿಕೆಗಳಿಗೆ ಹಾಗೂ ಜಲಚರ ಸಾಕಣೆಗೆ ಅಗತ್ಯವಿರುವ ಡೀಸೆಲ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಅಧಿಕಾರಿಗಳು ಗಮನಹರಿಸಬೇಕು. ರೈತರ ಬೇಡಿಕೆಯನ್ನು ಪರಿಶೀಲಿಸಿ ಸೂಕ್ತವಾಗಿ ಇಂಧನ ವಿತರಿಸುವುದನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ.
ಬಲ್ಕ್ ಕಾರ್ಯಾಚರಣೆಗಳಲ್ಲಿ ಅವ್ಯವಹಾರ ನಡೆದರೆ ಅದು ಸುರಕ್ಷತೆ ಮತ್ತು ಲೈಸೆನ್ಸಿಂಗ್ ನಿಯಮಗಳ ಗಂಭೀರ ಉಲ್ಲಂಘನೆಯೆಂದು ಪರಿಗಣಿಸಲಾಗುವುದು.

