ಬೆಂಗಳೂರು: ತಮ್ಮ ಕ್ಷೇತ್ರದ ಬೇಡಿಕೆ ವಿಚಾರವಾಗಿ ಮಾತನಾಡುತ್ತಿದ್ದ ಕುಣಿಗಲ್ ಶಾಸಕ ರಂಗನಾಥ್, ನಾನು ನಮ್ಮ ಕ್ಷೇತ್ರಕ್ಕೆ ನೀರಿನ ಯೋಜನೆ ಆರಂಭಿಸಬೇಕೆಂದಿದ್ದಾಗ ಸಚಿವ ಮಾಧುಸ್ವಾಮಿ ಅಡ್ಡಗಾಲು ಹಾಕಿದ್ರು, ಹಾಗಾಗಿ ಮಾಧುಸ್ವಾಮಿ ನನಗೆ ಭೂತದ ರೀತಿ ಕಾಣಿಸಿದರು ಎಂದು ವ್ಯಂಗ್ಯವಾಡಿದರು.
ಸದನದಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ನಾನು ಮೂರು ಟಿಎಂಸಿ ನೀರು ತೆಗೆದುಕೊಂಡಿದ್ದೆ. ಮತ್ತೆ ಮೂರು ಟಿಎಂಸಿ ನೀರಿನ ಯೋಜನೆ ಆರಂಭವಾಗಬೇಕಿತ್ತು ಆದ್ರೆ ಸಮ್ಮಿಶ್ರ ಸರ್ಕಾರ ಬಿದ್ದು ಹೋಯ್ತು. ಬಳಿಕ ಬಿಜೆಪಿ ಸರ್ಕಾರ ಬಂತು ಆಗ ಈ ಹಿಂದಿನ ಯೋಜನೆಗೆ ಸಚಿವ ಮಾಧುಸ್ವಾಮಿ ಅಡ್ಡಗಾಲು ಹಾಕಿದ್ರು ಹಾಗಾಗಿ ನನಗೆ ಮಾಧುಸ್ವಾಮಿ ಭೂತದ ತರಹ ಕಂಡ್ರು ಎಂದರು. ಇದನ್ನು ಕೇಳಿಸಿಕೊಂಡ ಮಾಧುಸ್ವಾಮಿ ನಕ್ಕು ಸಮ್ಮನಾದರು. ಇದನ್ನೂ ಓದಿ: ತವರಿಗೆ ನವೀನ್ ಮೃತದೇಹ- ಪ್ರಧಾನಿಗೆ ಕರೆಮಾಡಿ ಕೃತಜ್ಞತೆ ಸಲ್ಲಿಸಿದ ಮುಖ್ಯಮಂತ್ರಿ
ಗೂರುರು ಡ್ಯಾಮ್ನಿಂದ ಕುಣಿಗಲ್ ನಮ್ಮ ತಾಲೂಕಿಗೆ 200 ಕಿಮೀ. ಇದೆ. 3,000 ಎಮ್ಸಿಎಫ್ಟಿ ನೀರಿಗಾಗಿ ನಾನು ಬೇಡಿಕೆ ಇಟ್ಟಿದ್ದೇನೆ. ಆದರೆ ಅದನ್ನು ಕೊಡೋಕೆ ಈವರೆಗೂ ಆಗಿಲ್ಲ. ಆದರೆ ಈ ಬಾರಿ 32 ಕೆರೆಗಳನ್ನು ತುಂಬಿಸುವ ಕೆಲಸ ಆಗಿದೆ. ಈ ಹಿಂದಿನ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ ಶಿವಕುಮಾರ್ ಅವರು ಕೊಟ್ಟ ಸಹಕಾರದಿಂದ ಡ್ಯಾಮ್ನ್ನು ಪುನರ್ಶ್ಚೇತನ ಮಾಡಿದ್ದೇವು. ಈ ಹಿಂದಿನ ಸರ್ಕಾರದ 6ನೇ ಕ್ಯಾಬಿನೆಟ್ ಸಭೆಯಲ್ಲಿ ಈ ಯೋಜನೆಗೆ ಅನುಮತಿ ಸಿಕ್ಕಿತು. ಆ ಬಳಿಕ ದುರದೃಷ್ಟ ಎಂಬಂತೆ ಸರ್ಕಾರ ಬದಲಾವಣೆಯಾಯಿತು. ನಂತರ ಬಂದ ಸರ್ಕಾರದಲ್ಲಿ ಮಾಧುಸ್ವಾಮಿ ಈ ಯೋಜನೆ ಅಡ್ಡಗಾಲು ಹಾಕಿದ್ರು. ನಾನು ನೀರಿಗಾಗಿ ಹೋರಾಟ ಮಾಡುತ್ತ ಬರುತ್ತಿದ್ದೇನೆ ನನಗೆ ಈ ಯೋಜನೆಯನ್ನು ಪಾಸ್ ಮಾಡಿಕೋಡಿ. ಇದರಿಂದ ಬರುವ ಕ್ರೆಡಿಟ್ ಬಿಜೆಪಿ ಸರ್ಕಾರಕ್ಕೆ ಇರಲಿ. ಇದರಿಂದ 2 ಲಕ್ಷ ರೈತರಿಗೆ ಸಹಾಯ ಮಾಡಿದಂತಾಗುತ್ತದೆ ಎಂದರು.