ಕಲಬುರಗಿ: ಪ್ರಾಂಶುಪಾಲರ ಮೇಲೆ ಹಲ್ಲೆ ಮಾಡಿದ್ದ ಕಾಂಗ್ರೆಸ್ ನಾಯಕ ಹಾಗೂ ಮಗನ ವಿರುದ್ಧ ಎರಡೂ ದಿನ ಕಳೆದರೂ ಯಾವುದೇ ಪ್ರಕರಣ ದಾಖಲಾಗದೇ ಪೊಲೀಸರೇ ಅವರ ಬೆನ್ನಿಗೆ ನಿಂತಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.
ಖಾಸಗಿ ಕಾಲೇಜಿನ ಪ್ರಾಂಶುಪಾಲ ಮಹೇಶ್ ರಾಥೋಡ್ ಮೇಲೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವಯ್ಯ ಗುತ್ತೆದಾರ್ ಹಾಗೂ ಅವರ ಪುತ್ರ ಜಿಲ್ಲಾ ಪಂಚಾಯತ್ ಸದಸ್ಯ ರಾಜೇಶ್ ಗುತ್ತೆದಾರ್ ಹಲ್ಲೆ ಮಾಡಿದ್ದಾರೆ. ಕಲಬುರಗಿಯ ಗಣೇಶ್ ನಗರದಲ್ಲಿ ಸೋಮವಾರ ಈ ಘಟನೆ ನಡೆದಿದ್ದು, ದೂರು ದಾಖಲಾಗಿದ್ದರೂ ಪೊಲೀಸರು ಇದೂವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ.
ಗಣೇಶ್ ನಗರದ ಖಾಸಗಿ ಕಾಲೇಜು ಸಮೀಪ ಜಗದೇವಯ್ಯ ಗುತ್ತೆದಾರ್ ಮನೆಯ ಮುಂದೆ ವಿದ್ಯಾರ್ಥಿಗಳು ಬೈಕ್ ನಿಲ್ಲಿಸಿದ್ದರು. ಜಗದೇವಯ್ಯ ಮನೆಗೆ ಮರಳುತ್ತಿದ್ದಾಗ ಬೈಕ್ಗಳು ಅಡ್ಡ ನಿಂತಿದ್ದರಿಂದ ಹಾರ್ನ್ ಹಾಕಿದ್ದಾರೆ. ಆದರೆ ವಿದ್ಯಾರ್ಥಿಗಳು ಬೈಕ್ ತೆಗೆಯಲು ತಡ ಮಾಡಿದ್ದಾರೆ. ತಮಗಾದ ತೊಂದರೆಯಿಂದ ವಿದ್ಯಾರ್ಥಿಗಳನ್ನು ಜಗದೇವಯ್ಯ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಇದೇ ವೇಳೆ ಕಾಲೇಜಿನಿಂದ ಪ್ರಾಶುಪಾಲ ಮಹೇಶ್ ಹೊರಗೆ ಬರುತ್ತಿದ್ದಂತೆ ಅವರಿಗೂ ಬೈದು, ಜಾತಿ ನಿಂದನೆ ಮಾಡಿದ್ದಾರೆ.
ತಂದೆ ಜಗಳವಾಡುತ್ತಿರುವ ಧ್ವನಿ ಕೇಳಿಸಿಕೊಂಡ ರಾಜೇಶ್ ಸ್ಥಳಕ್ಕೆ ಬಂದಿದ್ದಾರೆ. ಪ್ರಾಂಶುಪಾಲ ಮಹೇಶ್ ಜೊತೆಗೆ ವಗ್ದಾಳಿ ನಡೆಸಿ ಹಲ್ಲೆ ಮಾಡಿದ್ದಾರೆ. ಇದನ್ನು ಖಂಡಿಸಿ ವಿದ್ಯಾರ್ಥಿಗಳು ಗಲಾಟೆ ಮಾಡಿದ್ದಕ್ಕೆ ಕೋಪಗೊಂಡ ರಾಜೇಶ್, ನಾನು ಜಿಲ್ಲಾ ಪಂಚಾಯತ್ ಸದಸ್ಯ ಗೊತ್ತಲ್ವಾ. ನನ್ನ ವಿರುದ್ಧ ನಿಮಗೆ ಏನು ಮಾಡಿಕೊಳ್ಳಲು ಆಗುವುದಿಲ್ಲ ಎಂದು ಅವಾಜ್ ಹಾಕಿದ್ದಾರೆ.
ಈ ಪ್ರಕರಣ ಸಂಬಂಧ ಸ್ಟೇಷನ್ ಬಜಾರ್ ಠಾಣೆಗೆ ಸೋಮವಾರ ದೂರು ನೀಡಿದ್ದೆ. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಸುಮ್ಮನಾಗಿದ್ದರು. ಅಷ್ಟೇ ಅಲ್ಲದೆ ಎರಡು ದಿನಗಳು ಕಳೆದರೂ ಎಫ್ಐಆರ್ ದಾಖಲಾಗಿಲ್ಲ ಎಂದು ಪ್ರಾಂಶುಪಾಲ ಮಹೇಶ್ ಆರೋಪಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv