– ಸಿಎಎ, ಎನ್ಆರ್ಸಿ ವಿರುದ್ಧ ಜ್ಞಾನ ಪ್ರಕಾಶ ಸ್ವಾಮೀಜಿ ಆಕ್ರೋಶ
ಚಾಮರಾಜನಗರ: ಭಾರತೀಯರು ಯಾರೆಂದು ತಿಳಿಯಬೇಕಾದರೆ ಡಿಎನ್ಎ ಚೆಕ್ ಮಾಡಿ. ಹಿಂದುಳಿದವರು ಮುಸ್ಲಿಮರ ರಕ್ತ ಒಂದೇ ಆಗಿರುತ್ತದೆ ಎಂದು ಉರಿಲಿಂಗಿಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಹೇಳಿದ್ದಾರೆ.
ಜಿಲ್ಲೆಯ ಕೊಳ್ಳೇಗಾಲದಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಭಾರೀ ಪ್ರತಿಭಟನೆ ನಡೆಯಿತು. ಪ್ರತಿಭಟನಾ ಮೆರವಣಿಗೆಗೆ ಪೊಲೀಸರು ಅವಕಾಶ ನೀಡದ ಕಾರಣ ಪಟ್ಟಣದ ಎಂಜಿಎಸ್ವಿ ಕಾಲೇಜು ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು. ಮುಸ್ಲಿಂ ಸಂಘಟನೆಗಳು ಆಯೋಜಿಸಿದ್ದ ಈ ಪ್ರತಿಭಟನಾ ಸಮಾವೇಶದಲ್ಲಿ ಮೈಸೂರಿನ ಉರಿಲಿಂಗಿ ಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಹರಿಹಾಯ್ದರು.
ಭಾರತೀಯರು ಯಾರೆಂದು ತಿಳಿಯಬೇಕಾದರೆ ಡಿಎನ್ಎ ಚೆಕ್ ಮಾಡಿ. ಹಿಂದುಳಿದವರು, ದಲಿತರು, ಮುಸ್ಲಿಮರ ರಕ್ತ ಒಂದೇ ಆಗಿರುತ್ತದೆ. ದಲಿತರು, ಮುಸ್ಲಿಮರು ಈ ದೇಶದ ಮೂಲನಿವಾಸಿಗಳು, ನೀವು ಜೆಕೊಸ್ಲೊವಾಕಿಯಾದಿಂದ ಬಂದವರು ನಮ್ಮ ಪೌರತ್ವ ಚೆಕ್ ಮಾಡಲು ನೀವು ಯಾರು ಎಂದು ಮೋದಿ ಹಾಗೂ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದರು.
ಸಂಸದ ತೇಜಸ್ವಿ ಸೂರ್ಯ ಹೇಳಿಕೆ ಕುರಿತು ಆಕ್ರೋಶ ವ್ಯಕ್ತಪಡಿಸಿ, ಪಂಕ್ಚರ್ ಹಾಕುವವರಿಂದ ಈ ದೇಶ ಹಾಳಾಗಿಲ್ಲ. ಪಾರ್ಲಿಮೆಂಟಿನಲ್ಲಿ ಕುಳಿತವರಿಂದ ಹಾಳಾಗಿದೆ. ಪಂಕ್ಚರ್ ಹಾಕುವವನಿಗೂ ಒಂದೇ ಮತ, ಪ್ರಧಾನಿಗೂ ಒಂದೇ ಮತ ಎಂದು ಅವರು ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿದರು.